Publish Date: Fri, 17 Apr 2020 (16:50 IST)
Updated Date: Fri, 17 Apr 2020 (16:54 IST)
ಬೆಂಗಳೂರು: ಲಾಕ್ ಡೌನ್ ವೇಳೆಯೂ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಫಾರ್ಮ್ ಹೌಸ್ ನಲ್ಲಿ ಪುತ್ರ ನಿಖಿಲ್ ಮದುವೆ ಸಮಾರಂಭವನ್ನು ಆಯೋಜಿಸಿದ್ದು ಈಗ ಟೀಕೆಗೆ ಗುರಿಯಾಗಿದೆ.
ಈ ಮದುವೆಗೆ ಸೀಮಿತ ಜನರಿಗೆ ಮಾತ್ರ ಅವಕಾಶ ನೀಡುವುದಾಗಿ ಹೇಳಿ ಕುಮಾರಸ್ವಾಮಿ ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿದ್ದರು. ಆದರೆ ಮದುವೆಗೆ 100-150 ಕಾರುಗಳು ಬಂದಿದ್ದವು. ಸಾಕಷ್ಟು ಜನರು ಸೇರಿದ್ದರು. ಇವರು ಯಾರೂ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಲಿಲ್ಲ. ಅಲ್ಲದೆ, ಮಾಸ್ಕ್, ಗ್ಲೌಸ್ ಯಾವುದನ್ನೂ ಧರಿಸಿರಲಿಲ್ಲ.
ಹೀಗಾಗಿ ನೆಟ್ಟಿಗರು ಟೀಕಾ ಪ್ರಹಾರ ನಡೆಸಿದ್ದಾರೆ. ಕೆಲವು ಬಡ ಕೂಲಿ ಕಾರ್ಮಿಕರು ತಮ್ಮ ಸ್ವಂತ ಊರಿಗೆ ಹೋಗಲಾಗದೇ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಕೆಲವು ರೋಗಿಗಳನ್ನೂ ಆಸ್ಪತ್ರೆಗೆ ಸಾಗಿಸಲು ಪೊಲೀಸರು ಅನುಮತಿ ಕೊಡುತ್ತಿಲ್ಲ. ಆದರೆ ಕುಮಾರಸ್ವಾಮಿ ಪುತ್ರನ ಮದುವೆಗೆ ಇಷ್ಟೊಂದು ಜನರಿಗೆ, ವಾಹನಗಳಿಗೆ ಹೇಗೆ ಅವಕಾಶ ಮಾಡಿಕೊಡಲಾಯಿತು? ಸಾಮಾನ್ಯ ಜನರಿಗೊಂದು, ರಾಜಕೀಯ ನಾಯಕರಿಗೊಂದು ನ್ಯಾಯವಾ? ಎಂದು ಟ್ವಿಟರಿಗರು ಟೀಕಿಸಿದ್ದಾರೆ.