Publish Date: Mon, 02 Nov 2020 (10:37 IST)
Updated Date: Mon, 02 Nov 2020 (10:39 IST)
ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ದಲಿತ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ ಪ್ರಕರಣದ ತನಿಖೆಯನ್ನು ಅಲ್ಲಹಾಬಾದ್ ಹೈಕೋರ್ಟ್ ಇಂದಿನಿಂದ ಆರಂಭಿಸಲಿದೆ. ಆದರೆ ವಿಚಾರಣೆಗೆ ಹಾಜರಾಗಲು ಸಂತ್ರಸ್ತೆ ಕುಟುಂಬ ಕೆಲವು ಷರತ್ತು ವಿಧಿಸಿದೆ.
ಇಂದಿನ ವಿಚಾರಣೆಗೆ ಸಂತ್ರಸ್ತೆ ಕುಟುಂಬಸ್ಥರು ಹಾಜರಾಗುತ್ತಿಲ್ಲ. ಬದಲಾಗಿ ಅವರ ಪರ ವಕೀಲೆ ಸೀಮಾ ಖುಶ್ವಾಹ ಹಾಜರಾಗಲಿದ್ದಾರೆ. ಆದರೆ ವಿಚಾರಣೆಗೆ ಹಾಜರಾಗಬೇಕಾದರೆ ನಮಗೆ ದೆಹಲಿಯಲ್ಲಿ ಸಂತ್ರಸ್ತೆ ಕುಟುಂಬಸ್ಥರಿಗೆ ವಾಸಸ್ಥಳದ ವ್ಯವಸ್ಥೆ ಮಾಡಿಕೊಡಬೇಕು. ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ ನೀಡಲಾಗುವುದು ಎಂಬ ಸಿಎಂ ಯೋಗಿ ಭರವಸೆ ಈಡೇರಿಸಬೇಕು. ಮೂರನೆಯದಾಗಿ ಘಟನೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ವಜಾಗೊಳಿಸಿ ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ಮೂರು ಬೇಡಿಕೆಗಳನ್ನು ಕೋರ್ಟ್ ಮುಂದಿಟ್ಟಿದೆ. ಈಗಾಗಲೇ ಈ ಪೈಕಿ ಎಸ್ ಪಿ ವಿಕ್ರಾಂತ್ ವೀರ್ ಅಮಾನಾತಾಗಿದ್ದು, ಅವರು ಇಂದಿನ ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ.