Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಪಂಚರಾಜ್ಯ ಚುನಾವಣಾ ಪ್ರಚಾರದ ಕಾವು ದಿನೇ ದಿನೇ ಕಾವೇರುತ್ತಿರುವ ಸಮಯದಲ್ಲಿ ಕ್ಯಾಬಿನೆಟ್ ಗುದ್ದಾಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಲೆ ಬಿಸಿ ತಂದಿದೆ.
ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆಯಲು ಸಿಎಂ ಮುಂದಾದರೂ ಪಕ್ಷದ ಹೈಕಮಾಂಡ್ ನಾಯಕರು ಪಂಚರಾಜ್ಯ ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ದೆಹಲಿ ಭೇಟಿ ನೀಡಲು ಸಜ್ಜಾಗಿ ನಿಂತಿರುವ ಸಿಎಂ ಬೊಮ್ಮಾಯಿಗೆ ಭೇಟಿಗೆ ಇನ್ನೂ ಗ್ರೀನ್ಸಿಗ್ನಲ್ ಸಿಕ್ಕಿಲ್ಲ.
ಇಂದು ಹೊರಡಲು ಸಿದ್ಧವಾಗಿದ್ದರೂ, ಕೆಲ ಸಂಸದರ ಸೂಚನೆ ಮೇರೆಗೆ ಸೋಮವಾರ ದೆಹಲಿಗೆ ತೆರಳಲು ಸಿಎಂ ಬೊಮ್ಮಾಯಿ ತೀರ್ಮಾನಿಸಿದ್ದಾರೆ. ಇತ್ತ, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ರೇಣುಕಾಚಾರ್ಯ, ನನಗೆ ಮಂತ್ರಿ ಸ್ಥಾನ ಬೇಕೇಬೇಕು ಎಂದು ಕುಳಿತಿದ್ದಾರೆ.
ಗೋವಾದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿರುವ ರಮೇಶ್ ಜಾರಕಿಹೊಳಿ, ಪಣಜಿಯಿಂದ ನೇರವಾಗಿ ದೆಹಲಿಗೆ ತೆರಳುವ ಸಂಭವ ಇದೆ. ಸಂಪುಟ ವಿಸ್ತರಣೆ ಮಾಡುವುದಿದ್ದರೆ ಈಗಲೇ ಈಗಲೇ ಮಾಡಬೇಕು. ಆಮೇಲೆ ಮಾಡಿದ್ರೂ ಪ್ರಯೋಜನ ಆಗಲ್ಲ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.
ಪ್ರಸಕ್ತ ಅವಧಿಯ ಸರ್ಕಾರದಲ್ಲಿ ಈ ಬಾರಿ ಸಂಪುಟ ಸರ್ಜರಿ ನಡೆದ್ರೆ ಬಹುಶಃ ಇದೇ ಕೊನೆಯದ್ದು. ಹೀಗಾಗಿ ಕೆಲ ತಿಂಗಳ ಮಟ್ಟಿಗಾದ್ರೂ ಮಂತ್ರಿಯಾಗೋಣ ಎಂದು ಬಿಜೆಪಿಯ ಒಂದು ಡಜನ್ಗೂ ಹೆಚ್ಚು ಶಾಸಕರು ಮಂತ್ರಿಯಾಗಲು ಪ್ರಯತ್ನ ನಡೆಸಿದ್ದಾರೆ.
ಆದಷ್ಟು ಬೇಗ ಸಂಪುಟ ಸರ್ಜರಿ ಮಾಡಿ ಎಂದು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಹುತೇಕರು ತಮ್ಮದೇ ನೆಟ್ವರ್ಕ್ ಮೂಲಕ ಹೈಕಮಂಡ್ ಮಟ್ಟದಲ್ಲೂ ಲಾಬಿ ನಡೆಸಿದ್ದಾರೆ.