Publish Date: Sat, 05 Feb 2022 (18:54 IST)
Updated Date: Sat, 05 Feb 2022 (19:07 IST)
ಬಿಬಿಎಂಪಿ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣ. ಅದರಲ್ಲೂ ಹೈಕಮಾಂಡ್ ಮುಂದೆ ಮಾನ ಉಳಿಸಿಕೊಳ್ಳಲು ರಾಜ್ಯ ಬಿಜೆಪಿ ಮುಂದಿರುವ ಅಗ್ನಿ ಪರೀಕ್ಷೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದು ಬೀಗದಿದ್ದರೆ ಮುಂದಿನ ದಿನಗಳನ್ನು ಅರಾಮವಾಗಿ ಮನೆಯಲ್ಲಿ ಕಳೆಯಬಹುದು.
ಕಾಂಗ್ರೆಸ್ ಗೆ ಬಿಬಿಎಂಪಿಯನ್ನು ಮತ್ತೊಮ್ಮೆ ಗೆದ್ದು ಮುಂದಿನ ವಿಧಾನಸಭಾ ಚುನಾವಣೆಯ ಹುರುಪನ್ನು ಇಮ್ಮಡಿ ಮಾಡಿಕೊಳ್ಳಬೇಕು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಬಿಬಿಎಂಪಿ ಗೆಲ್ಲಿಸಿ ಮತ್ತೊಮ್ಮೆ ಪಕ್ಷದೊಳಗೆ ತಮ್ಮ ತಮ್ಮ ಹಿಡಿತ ಗಟ್ಟಿಗೊಳಿಸುವ ಅವಶ್ಯಕತೆ ಇದೆ. ಎಂದಿನಂತೆ ಜೆಡಿಎಸ್ ಗೆಲ್ಲುವ ಅಲ್ಪಸ್ವಲ್ಪ ವಾರ್ಡ್ಗಳನ್ನು ಮುಂದಿಟ್ಟು ಸ್ಥಾಯಿ ಸಮಿತಿಯ ಮೇಲೆ ತಮಗಿರುವ ಆಧಿಪತ್ಯ ಮುಂದುವರೆಸಿಕೊಳ್ಳುವ ಲೆಕ್ಕಾಚಾರವಂತೂ ಇದೆ. ಹೀಗೆ ಪ್ರತಿ ಪಕ್ಷಗಳಿಗೂ ಈ ಬಾರಿಯ ಬಿಬಿಎಂಪಿ ಚುನಾವಣೆ ಅಗ್ನಿ ಪರೀಕ್ಷೆಯ ಅಖಾಡವಾಗಿ ಮಾರ್ಪಾಡಾಗಿದೆ.
ಸಿಎಂ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಕಳೆದ ಬೈ ಎಲೆಕ್ಷನ್ ಹಾಗೂ ಸ್ಥಳೀಯ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಿಕೊಂಡಿಲ್ಲ. ಇದು ಕಮಲ ಹೈ ಕಮಾಂಡ್ ರಾಜ್ಯ ಬಿಜೆಪಿಗರನ್ನು ತುಚ್ಛವಾಗಿ ಕಾಣೋದಕ್ಕೆ ದಾರಿ ಮಾಡಿ ಕೊಟ್ಟಿತು. ಹೀಗಾಗಿ ಈ ಬಿಬಿಎಂಪಿ ಚುನಾವಣೆ ರಾಜ್ಯ ಬಿಜೆಪಿ ಪಾಲಿಕೆಗೆ ಮಹತ್ವದ್ದು ಮತ್ತು ನಿರ್ಣಾಯಕ. ಇದೇ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಿಎಂ ಬೊಮ್ಮಾಯಿ ವಿಶೇಷವಾಗಿರುವ ಪ್ಲ್ಯಾನ್ಗಳೆನ್ನೆಲ್ಲಾ ಮಾಡಿಕೊಂಡು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿಯ ಓರ್ವ ನಾಯಕ ಪ್ರತಿಧ್ವನಿಯ ಪ್ರತಿನಿಧಿ ಜೊತೆಗೆ ಮಾತನಾಡುತ್ತಾ ಎಂದರು.
geetha
Publish Date: Sat, 05 Feb 2022 (18:54 IST)
Updated Date: Sat, 05 Feb 2022 (19:07 IST)