Publish Date: Tue, 11 Apr 2023 (09:35 IST)
Updated Date: Tue, 11 Apr 2023 (09:38 IST)
ರಾಮನಗರ : ಕೆರೆಗೆ ಮೀನು ಹಿಡಿಯಲು ಹೋಗಿದ್ದ ಮೂವರ ಪೈಕಿ ಇಬ್ಬರು ಮಕ್ಕಳು ನೀರು ಪಾಲಾಗಿರುವ ದಾರುಣ ಘಟನೆ ಹಾರೋಹಳ್ಳಿಯ ಮಾರಸಂದ್ರ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಬಾಲಕರನ್ನು ಪಟ್ಟಣದ ಸರ್ಕಲ್ ನಿವಾಸಿಗಳಾದ ಇಸ್ಮಾಯಿಲ್(13) ಮತ್ತು ಆಫ್ರಿದ್(12) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಮೀನು ಹಿಡಿಯುವ ಆಸೆಯಿಂದ ಪಟ್ಟಣದ ಮಸೀದಿ ಸರ್ಕಲ್ ನಿವಾಸಿಗಳಾದ ಮೂವರು ಬಾಲಕರು ಮಾರಸಂದ್ರ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾರೆ.
ಈ ವೇಳೆ ಒಬ್ಬ ಬಾಲಕ ಕೆರೆಯಲ್ಲಿದ್ದ ಸತ್ತೆಗೆ ಸಿಲುಕಿ ಮುಳುಗುವುದನ್ನು ಕಂಡು ಮತ್ತೊಬ್ಬ ಬಾಲಕ ಆತನನ್ನು ರಕ್ಷಿಸಲು ತೆರಳಿದ್ದಾನೆ. ಇದನ್ನು ಕಂಡ ಇನ್ನೊಬ್ಬ ಬಾಲಕ ಭಯಗೊಂಡು ಓಡಿದ್ದಾನೆ. ಈ ವೇಳೆ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕೆಲವರು ರಕ್ಷಣೆಗಾಗಿ ಓಡೋಡಿ ಬಂದಿದ್ದಾರೆ. ಆದರೆ ಅಷ್ಟರಲ್ಲೇ ಬಾಲಕರಿಬ್ಬರ ಪ್ರಾಣಪಕ್ಷಿ ಹಾರಿ ಹೋಗಿದೆ.
ಈ ಸಂಬಂಧ ಸ್ಥಳೀಯರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಬಾಲಕರಿಬ್ಬರ ಶವವನ್ನು ಹೊರತೆಗೆದಿದ್ದಾರೆ. ಮೃತ ಬಾಲಕರ ಪೋಷಕರು ಮೆಕ್ಕಾ ಮದೀನ ತೀರ್ಥಯಾತ್ರೆಗೆ ತೆರಳಿದ್ದು, ಸಾರ್ವಜನಿಕರು ಘಟನೆ ಕುರಿತು ಮರುಕ ವ್ಯಕ್ತಪಡಿಸಿದ್ದಾರೆ.