Publish Date: Thu, 06 Apr 2023 (09:09 IST)
Updated Date: Thu, 06 Apr 2023 (00:33 IST)
ಚೆನ್ನೈ : ಪಂಗುಣಿ ಆಚರಣೆಯ ಅಂಗವಾಗಿ ಕಲ್ಯಾಣಿಯಲ್ಲಿ ಸ್ನಾನಕ್ಕೆಂದು ತೆರಳಿದ ಐವರು ಪುರೋಹಿತರು ನೀರಿನಲ್ಲಿ ಮುಳುಗಿ ಸಾವನ್ನಪಿರುವ ಘಟನೆ ತಮಿಳುನಾಡಿನ ನಂಗನಲ್ಲೂರಿನ ಧರ್ಮಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಮೃತಪಟ್ಟವರನ್ನು ಸೂರ್ಯ (24), ರಾಘವನ್ (22), ಯೋಗೇಶ್ವರನ್ (23), ರಾಘವನ್ (18) ಹಾಗೂ ವನೇಶ್ (20) ಎಂದು ಗುರುತಿಸಲಾಗಿದೆ. ಪಂಗುಣಿ ಆಚರಣೆಯ ಅಂಗವಾಗಿ ನಂಗನಲ್ಲೂರಿನ ಧರ್ಮಲಿಂಗೇಶ್ವರ ದೇವಾಸ್ಥಾನದ ಪುರೋಹಿತರು 10:30ರ ವೇಳೆಗೆ ಸ್ನಾನಕ್ಕೆಂದು ಮೂವರಸಂಪೇಟ್ ದೇವಸ್ಥಾನದ ಬಳಿಯಿದ್ದ ಕಲ್ಯಾಣಿಗೆ ತೆರಳಿದ್ದರು.
ಈ ವೇಳೆ ಒಬ್ಬರು ಕಾಲು ಜಾರಿ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋಗಿ ಇನ್ನುಳಿದವರು ಸಾವನ್ನಪ್ಪಿದ್ದಾರೆ. ಎಲ್ಲಾ ಶವಗಳನ್ನು ನೀರಿನಿಂದ ಹೊರತೆಗೆದಿದ್ದು, ಈ ಕುರಿತು ತನಿಖೆ ಕೈಗೊಂಡಿದ್ದೇವೆ ಎಂದು ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಹೇಳಿಕೆ ನೀಡಿದ್ದಾರೆ.
ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಐವರೂ ಚೆನ್ನೈನ ಮೂರು ಬೇರೆ ಬೇರೆ ಸ್ಥಳಗಳಿಗೆ ಸೇರಿದವರಾಗಿದ್ದು, ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಶೋಧ ಕಾರ್ಯವನ್ನು ಮುಂದುವರೆಸುತ್ತಿದೆ ಎಂದು ಅಗ್ನಿಶಾಮಕ ಹಾಗೂ ರಕ್ಷಣಾ ಸೇವೆಗಳ ಡಿಜಿಪಿ ಅಭಾಷ್ ಕುಮಾರ್ ತಿಳಿಸಿದ್ದಾರೆ.