Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ನವೀನ್ ಡ್ರೆಸ್ ಹೋಲುವ ಫೋಟೋ ಬಂದಿದೆ. ಈ ಕುರಿತು ವಿದೇಶಾಂಗ ಸಚಿವರ ಜೊತೆ ಮಾತನಾಡಿ, ಮೃತದೇಹವನ್ನು ತರುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಗೆ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್ ಡ್ರೆಸ್ ಹೋಲುವ ಫೋಟೋವನ್ನು ಅವರ ಸ್ನೇಹಿತರು ಕಳಿಸಿದ್ದಾರೆ. ಈ ಬಗ್ಗೆ ಉಕ್ರೇನ್ ಭಾರತೀಯ ರಾಯಭಾರಿ ಕಚೇರಿಗೆ ಮಾತನಾಡುತ್ತೇನೆ. ಮೃತದೇಹವನ್ನು ತೆಗೆದುಕೊಂಡು ಬರಲು ಎಲ್ಲಾ ಪ್ರಯತ್ನವನ್ನು ನಡೆಸುತ್ತಿದ್ದೇವೆ ಎಂದರು.
ಕನ್ನಡಿಗರು ವಾಪಸ್ ತರಲು ವೇಗ ಕೊಡುತ್ತೇವೆ. 2-3 ದಿನಗಳಲ್ಲಿ 26 ವಿಮಾನಗಳು ಬರಲಿವೆ. ಇದರಲ್ಲಿ ಕನ್ನಡಿಗರನ್ನು ಶೀಘ್ರವಾಗಿ ಕರೆಸಲು ಕ್ರಮ ತೆಗೆದುಕೊಳ್ಳುತ್ತೇವೆ. ಯುದ್ಧ ನಡೆಯುತ್ತಿರುವುದರಿಂದ ಈ ಸಮಸ್ಯೆ ಆಗುತ್ತಿದೆ. ಭಾರತ ಸರ್ಕಾರ ಪ್ಲ್ಯಾನ್ ಮಾಡಿ ವಾರ್ ಝೋನ್ನಿಂದ ಬೇರೆ ಬೇರೆ ಕಡೆ ಕರೆಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ನವೀನ್ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ. ಆದರೆ ನಮ್ಮ ಮೊದಲ ಆದ್ಯತೆ ಅವರ ಮೃತದೇಹವನ್ನು ತರಿಸುವುದಾಗಿದೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದ ಅವರು, ಕುಟುಂಬ ಕೂಡಾ ದುಃಖದಲ್ಲಿ ಇದೆ. ಶವ ತರಿಸಿಕೊಡುವಂತೆ ಅವರು ಮನವಿ ಮಾಡಿದ್ದಾರೆ.