Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿರುವ ನಡುವೆಯೇ ವಿದ್ಯಾರ್ಥಿಗಳು ಸೇರಿದಂತೆ ಭಾರತದ ಪ್ರಜೆಗಳು ಕೂಡಲೇ ಉಕ್ರೇನ್ ರಾಜಧಾನಿ ಕೀವ್ ನಗರ ಬಿಟ್ಟು ಹೊರಡುವಂತೆ ಕೀವ್ ನಲ್ಲಿರುವ ಭಾರತದ ರಾಯಭಾರಿ ಕಚೇರಿ ಮಂಗಳವಾರ (ಮಾರ್ಚ್ 01) ಹೊಸ ಮಾರ್ಗಸೂಚಿ ಹೊರಡಿಸಿದೆ.
ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯರು ಇಂದೇ ಕೂಡಲೇ ಕೀವ್ ಬಿಟ್ಟು ಹೊರಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ರೈಲು ಅಥವಾ ಯಾವುದೇ ರೀತಿಯ ವ್ಯವಸ್ಥೆ ಬಳಸಿಕೊಂಡು ಯುದ್ಧಪೀಡಿತ ಉಕ್ರೇನ್ ತೊರೆಯುವಂತೆ ಭಾರತೀಯ ರಾಯಭಾರಿ ಕಚೇರಿ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ಉಕ್ರೇನ್ ನ ಪ್ರಮುಖ ನಗರಗಳ ಮೇಲೆ ರಷ್ಯಾ ಪಡೆಗಳು ಬಾಂಬ್ ದಾಳಿಯನ್ನು ಮುಂದುವರಿಸಿದ್ದು, ಮಂಗಳವಾರ ಕರ್ನಾಟಕ ಮೂಲದ ಹಾವೇರಿಯ ವಿದ್ಯಾರ್ಥಿ ನವೀನ್ ಎಂಬಾತ ಸಾವನ್ನಪ್ಪಿರುವ ಘಟನೆ ನಡೆದಿದೆ. ಈಗಾಗಲೇ 1,500 ಅಧಿಕ ಮಂದಿ ಭಾರತಕ್ಕೆ ವಾಪಸ್ ಆಗಿದ್ದು, ಇನ್ನುಳಿದ ಜನರನ್ನು ತಾಯ್ನಾಡಿಗೆ ಕರೆತರಲು ಭಾರತ ಸರ್ಕಾರ ಎಲ್ಲಾ ರೀತಿಯಿಂದಲೂ ಪ್ರಯತ್ನಿಸುತ್ತಿರುವುದಾಗಿ ವರದಿ ವಿವರಿಸಿದೆ.
ಈಗಾಗಲೇ ಆಪರೇಶನ್ ಗಂಗಾ ಹೆಸರಿನಲ್ಲಿ ಸಾವಿರಕ್ಕೂ ಅಧಿಕ ಜನರನ್ನು ಭಾರತಕ್ಕೆ ಕರೆತರಲಾಗಿದ್ದು, ಉಕ್ರೇನ್ ನಲ್ಲಿರುವ ಭಾರತೀಯರ ಸ್ಥಳಾಂತರ ಕಾರ್ಯದಲ್ಲಿ ವಾಯುಪಡೆ ಕೈಜೋಡಿಸಬೇಕೆಂದು ಪ್ರಧಾನಿ ಮೋದಿ ಮಂಗಳವಾರ ತಿಳಿಸಿದ್ದರು.