Publish Date: Fri, 12 Oct 2018 (18:15 IST)
Updated Date: Fri, 12 Oct 2018 (18:21 IST)
ಅಲ್ಲಿ ಇಂದು ಹೂವು, ಮಾವಿನ ತೋರಣ, ರಂಗೋಲಿಗಳಿಂದ ಆಲಂಕೃತಗೊಂಡ ನಿಲಯದಲ್ಲಿ ದೈನಂದಿನ ಕಚೇರಿ ಕೆಲಸದಲ್ಲಿ ನಿರತರಾಗುತ್ತಿದ್ದ ಅಧಿಕಾರಿ-ಸಿಬ್ಬಂದಿಗಳು ಮದುವೆಯ ಶಾಸ್ತ್ರದ ಕಾರ್ಯದಲ್ಲಿ ಬ್ಯೂಸಿಯಾಗಿದ್ದು ಕಂಡುಬಂತು.
ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ ಮದುವೆಯ ಸಂಭ್ರಮದ ಮನೆಮಾಡಿತು. ನಿಲಯದಲ್ಲಿ ಕಳೆದ 4 ವರ್ಷದಿಂದ ನಿವಾಸಿಯಾಗಿರುವ ಅಂಬಿಕಾ ಮತ್ತು 7 ವರ್ಷಗಳಿಂದ ನಿವಾಸಿಯಾಗಿರುವ ಅಶ್ವಿನಿಯ ಮದುವೆ ಸಮಾರಂಭ ನಡೆಯಿತು.
ಅನಾಥೆಯರಿಗೆ ಆಶ್ರಯಕೊಟ್ಟ ಮಹಿಳಾ ನಿಲಯವು ನಿವಾಸಿಗಳ ಒಪ್ಪಿಗೆ ಪಡೆದು ಅವರ ಮುಂದಿನ ಭವಿಷ್ಯದ ಪುನರ್ವಸತಿ ಹಿತದೃಷ್ಠಿಯಿಂದ ಹೆತ್ತವರಂತೆ ಮದುವೆ ಮಾಡಿಕೊಟ್ಟಿದೆ. ಅಂಬಿಕಾಳನ್ನು ವರಸಿಕೊಂಡ ಗುಂಡುರಾವ ಜೋಷಿ ಹಾಗೂ ಅಶ್ವಿನಿಯೊಂದಿಗೆ ಮದುವೆಯಾದ ಪವನಕುಮಾರ ಕುಲಕರ್ಣಿ ಇಬ್ಬರು ಅನಾಥೆಯರ ಬಾಳಿಗೆ ಬೆಳಕು ನೀಡಿದ್ದಾರೆ.
ಶುಕ್ರವಾರ ಬೆಳಿಗ್ಗೆ 9.30 ಗಂಟೆಗೆ ದೈವ ಅಕ್ಷತೆ ಹಾಗೂ 11.42 ಗಂಟೆಗೆ ಮಿಥುನ ಲಗ್ನದ ಶುಭಮುಹೂರ್ತದಲ್ಲಿ ನವ ವಧು-ವರರು ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಚಾರ್ಯ ಬಾಪುರಾವ ಅವರು ಹಿಂದು ಧರ್ಮದ ಪ್ರಕಾರ ಮದುವೆ ಶಾಸ್ತ್ರ ಕಾರ್ಯವನ್ನು ನಡೆಸಿದರು.