Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಏಕಾಏಕಿ ಆಫ್ಲೈನ್ ಪರೀಕ್ಷೆಯನ್ನು ನಡೆಸಲು ಮುಂದಾಗಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಸೋಮವಾರದಂದು ಸುವರ್ಣ ವಿಧಾನಸೌಧ ಚಲೋ ಹೋರಾಟಕ್ಕೆ ಮುಂದಾಗಿದ್ದಾರೆ.
ಸುಮಾರು ಒಂದು ವಾರಗಳ ಸುದೀರ್ಘ ಹೋರಾಟದ ನಂತರ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದಿದ್ದ ಕಾನೂನು ವಿವಿ ಕುಲಪತಿಗಳಾದ ಈಶ್ವರ್ ಭಟ್ ಉನ್ನತ ಅಧಿಕಾರಿಗಳು ಹಾಗೂ ತಜ್ಞರ ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೂ ಡಿಸೆಂಬರ್ 15 ರಂದು ನಡೆಯಲಿರುವ ಪರೀಕ್ಷೆಯನ್ನು ತಡೆಹಿಡಿಯಲಾಗುವುದು ಎಂದು ಘೋಷಿಸಿದ್ದರು.
ಈಗ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಆಫ್ ಲೈನ್ ಪರೀಕ್ಷೆ ನಡೆಸುವುದರಿಂದ ಅಕಾಡೆಮಿಕ್ ವರ್ಷದಲ್ಲಿ ವಿಳಂಭವಾಗುತ್ತದೆ. ಇದರಿಂದಾಗಿ ಈಗ ಮೂರು ವರ್ಷದ ಕಾನೂನು ಕೋರ್ಸ್ ನ್ನು ನಾಲ್ಕು ವರ್ಷಕ್ಕೆ, ಐದು ವರ್ಷದ ಕೋರ್ಸ್ ನ್ನು ಆರು ವರ್ಷಕ್ಕೆ ಮುಗಿಸಬೇಕಾಗುತ್ತದೆ, ಇದರಿಂದ ತಮ್ಮ ಭವಿಷ್ಯವು ಡೋಲಾಯಮಾನವಾಗುತ್ತದೆ ಎಂದು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಈಗ ಹುಬ್ಬಳ್ಳಿಯ ವಿಶ್ವವಿದ್ಯಾನಿಲಯದಲ್ಲಿನ ಆವರಣದಲ್ಲಷ್ಟೇ ಅಲ್ಲದೆ ಬೆಂಗಳೂರು ಮತ್ತು ರಾಜ್ಯದ ಇತರ ಜಿಲ್ಲಾ ಕೇಂದ್ರಗಳಲ್ಲಿಯೂ ಕೂಡ ವಿಶ್ವವಿದ್ಯಾನಿಲಯದ ಕುಲಪತಿಗಳ ಈ ಧೋರಣೆಯನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಕಾನೂನು ವಿವಿಯ ವಿದ್ಯಾರ್ಥಿಗಳ ಹೋರಾಟಕ್ಕೆ ಈಗ ಎನ್ಎಸ್ಯುಐ ಹಾಗೂ ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಇದರ ಜೊತೆಗೆ ಕಾನೂನು ಪದವಿಯ ವಿದ್ಯಾರ್ಥಿಗಳು ಪರೀಕ್ಷಾ ವಿಚಾರವಾಗಿ ಹೈಕೋರ್ಟ್ ಮೊರೆ ಹೋಗಿದ್ದು, ಪ್ರಕರಣದ ವಿಚಾರಣೆಯು ಬೆಂಗಳೂರು ಮತ್ತು ಧಾರವಾಡ ಹೈಕೋರ್ಟ್ ಪೀಠಗಳಲ್ಲಿ ಸೋಮವಾರದಂದು( (ಡಿಸೆಂಬರ್ 13) ವಿಚಾರಣೆಗೆ ಬರಲಿದೆ.