Publish Date: Tue, 24 Sep 2019 (17:56 IST)
Updated Date: Tue, 24 Sep 2019 (17:58 IST)
ಬಹು ವರ್ಷಗಳ ನಂತರದಲ್ಲಿ ಇತಿಹಾಸ ಪ್ರಸಿದ್ಧ ದೇವೀರಮ್ಮಣ್ಣಿ ಕೆರೆಯು ಭರ್ತಿಯಾಗಿದೆ.
ಮಂಡ್ಯ ಇತಿಹಾಸ ಪ್ರಸಿದ್ಧ ದೇವೀರಮ್ಮಣ್ಣಿ ಕೆರೆಯು ಭರ್ತಿಯಾಗಿದ್ದು, ಕೋಡಿಬಿದ್ದು ನಯನ ಮನೋಹರವಾದ ಫಾಲ್ಸ್ ನಿರ್ಮಾಣವಾಗಿದೆ.
ಹೀಗಾಗಿ ಕೆರೆಕೋಡಿ ಅಭಿವೃದ್ಧಿಗೆ ಸಾರ್ವಜನಿಕರ ಆಗ್ರಹ ಕೇಳಿಬರುತ್ತಿದೆ.
ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ಇತಿಹಾಸ ಪ್ರಸಿದ್ಧ ದೇವೀರಮ್ಮಣ್ಣಿ ಕೆರೆಯು ಭರ್ತಿಯಾಗಿದ್ದು, ನಯನ ಮನೋಹರವಾದ ದೃಶ್ಯವನ್ನು ನಿರ್ಮಾಣ ಮಾಡಿದೆ.
ಹೇಮಾವತಿ ಜಲಾಶಯ ಯೋಜನೆಯ ಕಾಲುವೆಯ ನೀರು ಮತ್ತು ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಾಲ್ಕೇ ದಿನದಲ್ಲಿ ಕೆರೆಯು ಭರ್ತಿಯಾಗಿರುವುದು ರೈತಬಾಂಧವರು ಹಾಗೂ ಪಟ್ಟಣದ ನಾಗರಿಕರಲ್ಲಿ ಸಂತೋಷ ಉಂಟುಮಾಡಿದೆ.
ಕೋಡಿಯ ಪ್ರದೇಶದಲ್ಲಿ ಬೆಳೆದಿರುವ ಮುಳ್ಳಿನ ಪೊದೆಗಳು ಹಾಗೂ ಗಿಡಗೆಂಟೆಗಳನ್ನು ತೆರವುಗೊಳಿಸಿ, ಸಾರ್ವಜನಿಕರು ಹಾಗೂ ಪ್ರವಾಸಿಗರು ಕುಳಿತು ಫಾಲ್ಸ್ ನ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳಲು ಅನುವುಮಾಡಿಕೊಡಬೇಕು.
ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಪುರಸಭೆಯು ಕೆರೆಕೋಡಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ಬಣ್ಣ ಬಣ್ಣದ ವಿದ್ಯುತ್ ಬೆಳಕಿನ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರೆ ಈ ಸ್ಥಳವು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಯಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.