Publish Date: Thu, 12 Sep 2019 (14:52 IST)
Updated Date: Thu, 12 Sep 2019 (14:54 IST)
ಮಳೆ ನಿಂತರೂ ನಿಲ್ಲುತ್ತಿಲ್ಲ ಕಣ್ಣೀರ ಧಾರೆ. ಬದುಕನ್ನೆ ಬೀದಿಗೆ ತಳ್ಳಿದ ಕೃಷ್ಣಾ ನದಿಗೆ ಸಂತ್ರಸ್ಥರು ಹಿಡಿಶಾಪ ಹಾಕುವಂತಾಗಿದೆ.
ಕಳೆದ ತಿಂಗಳ ಹಿಂದಷ್ಟೇ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಅಬ್ಬರಿಸಿ ಸುರಿದ ಭಾರಿ ಮಳೆಯಿಂದಾಗಿ ಸುನಾಮಿಯಂತೆ ಅಪ್ಪಳಿಸಿ ಹಲವು ಗ್ರಾಮಗಳನ್ನು ಪ್ರವಾಹ ಪೀಡಿತವಾಗಿಸಿದ್ದ ಕೃಷ್ಣಾ ನದಿಯ ಒಳ ಹರಿವು ನಿಧಾನಕ್ಕೆ ಕಡಿಮೆ ಆಗತೊಡಗಿದೆ.
ಆದರೆ ಚಿಕ್ಕೋಡಿ ವ್ಯಾಪ್ತಿಯ 81 ಪ್ರವಾಹ ಪೀಡಿತ ಗ್ರಾಮಗಳಲ್ಲಿ ಮಾತ್ರ ಮಡುಗಟ್ಟಿದ ದುಃಖ. ಸಂತ್ರಸ್ಥರ ಮುಖದಲ್ಲಿ ಇನ್ನೂ ಬತ್ತದ ಆತಂಕದ ಛಾಯೆ, ಯಾರಾದರೂ ಮಾತನಾಡಿಸಿರೂ ಸಾಕು ತೇವಗೊಳ್ಳುವ ಕಣ್ಣುಗಳು. ಇದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದೊಡ್ಡವಾಡ, ಪಿ ಕೆ ನಾಗನೂರು, ದರೂರ, ಖವಟಕೊಪ್ಪ, ಅವರಕೋಡ, ಹುಲಗಬಾಳ ಗ್ರಾಮಗಳ ವ್ಯಥೆಯ ಕತೆ.
ಇದ್ದ ಮನೆಗಳೂ ಬಿದ್ದು ಹೋಗಿ ಸದ್ಯ ಅತಂತ್ರವಾದ ಸಂತ್ರಸ್ತರಿಗೆ ಮುಂದೇನು? ಅನ್ನುವ ಚಿಂತೆ ಕಾಡುತ್ತಿದ್ದು ಅಧಿಕಾರಿಗಳ ಆಮೆಗತಿಯ ಕಾರ್ಯಾಚರಣೆಯಿಂದಾಗಿ ಹಲವು ಕುಟುಂಬಗಳು ಇನ್ನೂ ಕಣ್ಣೀರಿನಲ್ಲೇ ಕೈ ತೊಳೆಯುವಂತಾಗಿದೆ.
ಇನ್ನೂ ಬಹುತೇಕ ಗ್ರಾಮಗಳಲ್ಲಿ ನೂರಾರು ಮನೆಗಳು ಬಿದ್ದು ಹೋಗಿವೆ. ಸರ್ಕಾರ ಕೊಟ್ಟ ಹತ್ತು ಸಾವಿರ ರೂಪಾಯಿ ಚೆಕ್ಕುಗಳು ಕೂಡ ಜಮೆಯಾಗದೆ ಸಂತ್ರಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸ್ಥಿತಿ ಶತ್ರುಗಳಿಗೂ ಬೇಡ. ನಮ್ಮನ್ನು ಸಂಪೂರ್ಣ ಸ್ಥಳಾಂತರ ಮಾಡಿ ಪುಣ್ಯ ಕಟ್ಟಿಕೊಳ್ಳಿ. ಉಕ್ಕಿ ಹರಿದ ನದಿಯಿಂದಾಗಿ ಮಕ್ಕಳ ವಿದ್ಯಾಬ್ಯಾಸಕ್ಕೂ ತೊಂದರೆ ಆಗಿದೆ. ಮನೆಗಳು ಬಿದ್ದು ಹೋಗಿದ್ದು ಆಸರೆಯೂ ಇಲ್ಲದಂತಾಗಿದೆ. ಯಾರು ಬಂದು ಹೋದರೂ ನಮ್ಮ ಸಂಕಷ್ಟ ಮಾತ್ರ ಕಮ್ಮಿ ಆಗುತ್ತಿಲ್ಲ ನಮಗೆ ಶಾಶ್ವತ ಪರಿಹಾರ ಕಲ್ಪಿಸಿ ಅನ್ನುತ್ತಾರೆ ಸಂತ್ರಸ್ಥರು.
Jagadeesh
Publish Date: Thu, 12 Sep 2019 (14:52 IST)
Updated Date: Thu, 12 Sep 2019 (14:54 IST)