Publish Date: Tue, 13 Sep 2022 (14:41 IST)
Updated Date: Tue, 13 Sep 2022 (15:46 IST)
ಆಧುನಿಕ ಜೀವನದ ಭರಾಟೆಯಲ್ಲಿ ಮಾನವೀಯತೆಯು ಅಳಿವಿನಂಚಿಗೆ ಬಂದು ನಿಂತಿರುವುದು ಮಾತ್ರ ಸುಳ್ಳಲ್ಲ. ಇಂದು ಮಾನವೀಯತೆ ಮರೀಚಿಕೆ ಆಗಿರುವುದು ವಿಪರ್ಯಾಸದ ಸಂಗತಿ. ಡಿಜಿಟಲ್ ದುನಿಯಾ ಒಳಗೆ ಜೀವಿಸುತ್ತಿರುವ ಜನರು ಮಾನವೀಯತೆ ಸಂಪೂರ್ಣ ಮರೆತಿದ್ದಾರೆ ಎನ್ನುವುದಕ್ಕೆ ಈ ಒಂದು ಘಟನೆ ತಾಜಾ ಸಾಕ್ಷಿಯಾಗಿದೆ.
ಇಲ್ಲಿ ನಡೆದಿರುವುದು ಇಡೀ ಮನುಕುಲವೇ ತಲೆತಗ್ಗಿಸುವಂತಹ ಘಟನೆ. ನೇಣು ಹಾಕಿಕೊಳ್ಳದಂತೆ ತಡೆಯುವುದನ್ನು ಬಿಟ್ಟು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅಮಾನವೀಯ ಘಟನೆ ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.
ವಿವರಣೆಗೆ ಬರುವುದಾದರೆ, ಹನುಮನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಫ್ಲೈಓವರ್ ಮೇಲಿರುವ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ಮಂಜುನಾಥ್ (25) ಎಂದು ಗುರುತಿಸಲಾಗಿದೆ. ನೇಣು ಹಾಕಿಕೊಳ್ಳುವುದನ್ನು ವಿಡಿಯೋ ಮಾಡುತ್ತಿರುವ ಕೆಲವರು ಮಂಜುನಾಥ್ನನ್ನು ಕಾಪಾಡುವ ಕನಿಷ್ಟ ಪ್ರಯತ್ನವನ್ನೂ ಮಾಡದೇ, ಕುಡಿದು ಹೀಗೆ ಮಾಡಿಕೊಳ್ಳುತ್ತಿದ್ದಾನೆ ಎಂದು ವಿಡಿಯೋದಲ್ಲಿ ಮಾತನಾಡಿಕೊಂಡಿದ್ದಾರೆ.
ಮರೆಯಾದ ಮಾನವೀಯತೆಗೆ ಕನ್ನಡಿ ಹಿಡಿದಂತಿದೆ. ಪ್ರಯತ್ನಿಸಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಬಹುದಾಗಿತ್ತು. ಜೀವನದಲ್ಲಿ ಜಿಗುಪ್ಸೆಗೊಂಡು ಮಂಜುನಾಥ್ ನೇಣಿಗೆ ಶರಣಾಗಿದ್ದಾರೆ. ತಾನೇ ಉಟ್ಟಿದ್ದ ಲುಂಗಿಯಿಂದ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಮಂಜುನಾಥ್ ಸಾವಿಗೆ ಶರಣಾಗಿದ್ದು, ಆತನ ಸಾವು ಮಾನವೀಯತೆಯ ಸಾವಿಗೆ ಉದಾಹರಣಯಂತಿದೆ.