Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚಲನಚಿತ್ರ ಎನ್ನುವುದು ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು, ಹಿನ್ನೆಲೆ ಸಂಗೀತ, ಸಿನಿಮಾಟೋಗ್ರಫಿ, ಸಂಕಲನ ಹೀಗೆ ಹತ್ತಾರು ತಂತ್ರಜ್ಞರು ಸಮೀಕರಣಗೊಂಡು ಸಿದ್ಧವಾಗುವ ಮಾಧ್ಯಮ. ಇವರಲ್ಲಿ ಯಾರಾದರೊಬ್ಬರು ತಮ್ಮ ಕಾರ್ಯದಲ್ಲಿ ಸೋತರೂ ಇಡೀ ಸಿನಿಮಾ ಸೋಲುತ್ತದೆ' ಎಂದು ವಾರ್ತಾ ಇಲಾಖೆ ಉಪನಿರ್ದೇಶಕ ಮಂಜುನಾಥ ಡೊಳ್ಳಿನ ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕ ಭಾಗ್ಯನಗರದ ಡಿ.ಎಂ.ಬಡಿಗೇರ ಅವರ 'ಅವ್ವ' ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ 37ನೇ ವಿಚಾರಮಂಥನ ಕೂಟದಲ್ಲಿ ಮಾತನಾಡಿದ ಅವರು 'ಭಿನ್ನ ಕಾರಣಗಳಿಗಾಗಿ ಸಿನಿಮಾ ನೋಡುವ ಪ್ರೇಕ್ಷಕ ವರ್ಗವಿದೆ. ಸಿನಿಮಾ ಮುಖ್ಯವಾಗಿ ಮನರಂಜನೆ ಮಾಧ್ಯಮ. ಜೊತೆಗೆ ಅದಕ್ಕೆ ತನ್ನದೇ ಆದ ಸಾಮಾಜಿಕ ಜವಾಬ್ದಾರಿಯೂ ಇದೆ' ಎಂದರು.
'ಮಿನುಗುತ್ತಿರುವ ಕನ್ನಡ ಚಿತ್ರರಂಗ; ಪ್ರೇಕ್ಷಕ ಬಾರದೇ ಕರಗುತ್ತಿರುವ ಚಿತ್ರಮಂದಿರ' ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಬಸವರಾಜ ಕರುಗಲ್ 'ಸದಭಿರುಚಿಯ ಕನ್ನಡ ಚಲನಚಿತ್ರಗಳಿಗೆ ಪ್ರೇಕ್ಷಕರು ಪ್ರೋತ್ಸಾಹಿಸಬೇಕು. ಸಿನಿಮಾ ಮಂದಿರಗಳಲ್ಲಿ ಸಮೂಹದೊಂದಿಗೆ ಚಲನಚಿತ್ರ ಆಸ್ವಾದಿಸುವ ಅನುಭವ, ವೈಯಕ್ತಿಕವಾಗಿ ಆನ್ಲೈನ್ ವೇದಿಕೆಗಳಲ್ಲಿ ದಕ್ಕುವುದಿಲ್ಲ' ಎಂದರು.