Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಂಡ್ಯ : ಪರಿಷತ್ ಚುನಾವಣೆಗೆ ಸಾಮಾನ್ಯ ವ್ಯಕ್ತಿಗಳು ಸ್ಪರ್ಧಿಸುವಂತಿಲ್ಲ.
ನಿಯಮದ ಪ್ರಕಾರ ಸ್ಪರ್ಧೆಗೆ ಅರ್ಹರಿದ್ದರೂ ಗೆಲ್ಲುವ ಉದ್ದೇಶವಿದ್ದವರು ಹಣವಂತರಾಗಿಬೇಕು ಇಲ್ಲವೇ ಗುಣವಂತರೆಂದು ಪಕ್ಷ ಗುರುತಿಸಿದವರಾಗಿದ್ದರೆ ಚುನಾವಣೆಯಲ್ಲಿ ಪೈಪೋಟಿ ನೀಡಬಹುದು.
ಪಕ್ಷದ ಚಿಹ್ನೆ ಇಲ್ಲದೇ ಆಯ್ಕೆಯಾದ ಗ್ರಾಮಪಂಚಾಯಿತಿ ಸದಸ್ಯರು ಯಾರಿಗೆ ಬೇಕಾದರೂ ಮತದಾನ ಮಾಡಲು ಸ್ವತಂತ್ರರು. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಇರುವ ಗ್ರಾ.ಪಂ. ಸದಸ್ಯರಿಗೆ ಡಿಮ್ಯಾಂಡ್ ಜೋರಾಗಿದೆ. ಚುನಾವಣಾ ವೆಚ್ಚದ ಬಗ್ಗೆಯೂ ಗಂಭೀರ ಚರ್ಚೆಯಾಗುತ್ತಿದೆ. ಎಲ್ಲರೂ ಗ್ರಾ.ಪಂ ಸದಸ್ಯರಾಗಿ ಯಾವುದಾದರೊಂದು ಪಕ್ಷದ ಕಾರ್ಯಕರ್ತರಾಗಿ ಗೆದ್ದಿರುತ್ತಾರೆ. ಚಿಹ್ನೆ ಇಲ್ಲದ ಕಾರಣ ವಿಪ್ ಪಡೆಯಲು ಅವಕಾಶವಿಲ್ಲ. ಇದರಿಂದ ಇಷ್ಟಬಂದವರಿಗೆ ಮತ ಚಲಾಯಿಸಬಹುದು.
ಪರಿಷತ್ಗೆ ಸ್ಪರ್ಧಿಸುವ ಆಕಾಂಕ್ಷಿಗಳು ಮತ್ತು ರಾಜಕೀಯ ಪಕ್ಷಗಳಿಗೆ 'ಚುನಾವಣಾ ಬಂಡವಾಳ'ದ ಚಿಂತೆ ಎದುರಾಗಿದೆ. ಪಕ್ಷದ ಅಧೀನಕ್ಕೆ ಒಳಪಡದ ಗ್ರಾ.ಪಂ. ಸದಸ್ಯರಿಗೆ ಆಸೆ, ಆಮಿಷ ಒಡ್ಡಿಯೇ ಸೆಳೆದುಕೊಳ್ಳಬೇಕು. ಹೀಗಾಗಿ ಅಭ್ಯರ್ಥಿಗಳು ಬಂಡವಾಳ ಭಾರೀ ಹೂಡಬೇಕಿದೆ. ಕಳೆದ ಚುನಾವಣೆಯಲ್ಲಿ ಕೆಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರಿಗೆ 25 ಸಾವಿರ, 36 ಸಾವಿರ, 63 ಸಾವಿರ ಹೀಗೆ ನಾನಾ ಹಂತದ ಮತದಾರರಿಗೆ ಒಂದೊಂದು ರೀತಿ ಹಣ ನೀಡಿದ್ದರೆಂಬ ಮಾತುಗಳು ಈಗಲೂ ಕೇಳಿ ಬರುತ್ತಿವೆ. ಜಿಲ್ಲಾ, ತಾಲೂಕು ಪಂಚಾಯಿತಿ ಸದಸ್ಯರಿಲ್ಲದಿರುವುದು ಸ್ಪಲ್ಪಮಟ್ಟಿನ ನೆಮ್ಮದಿಯಾಗಿದೆ.