Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ವಿವಾದಿತ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ ರಾಜ್ಯದಲ್ಲೂ ಎಪಿಎಂಸಿ ವ್ಯವಹಾರ
(ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಕಾಯಿದೆ ಹಾಗೂ ಭೂ ಸುಧಾರಣೆ (ಎರಡನೇ ತಿದ್ದುಪಡಿ) ಕಾಯಿದೆಯನ್ನು ರಾಜ್ಯ ಸರಕಾರ ಹಿಂಪಡೆಯಬೇಕು ಎಂದು ಆಗ್ರಹ ಜೋರಾಗುತ್ತಿದೆ.
ರೈತಪರ ಸಂಘಟನೆಗಳು ನ.26ರಂದು ರಾಜ್ಯ- ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಕಾಯಿದೆಗಳನ್ನು ಹಿಂಪಡೆಯುವಂತೆ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಲು ಸಜ್ಜಾಗಿವೆ. ಈ ಹೋರಾಟಕ್ಕೆ ದನಿಗೂಡಿಸಿರುವ ಪ್ರತಿಪಕ್ಷಗಳು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಕಾಯಿದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿವೆ. ಕೇಂದ್ರ ಜಾರಿಗೊಳಿಸಿದ್ದ ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ ಕಾಯಿದೆ (ಕೃಷಿ ಮಾರುಕಟ್ಟೆ ಕಾಯಿದೆ)ಯಂತೆ ರಾಜ್ಯ ಸರಕಾರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಕಾಯಿದೆಯನ್ನು ಕಳೆದ ಡಿಸೆಂಬರ್ ಜಾರಿಗೊಳಿಸಿದೆ.