Publish Date: Mon, 20 May 2019 (13:36 IST)
Updated Date: Mon, 20 May 2019 (13:38 IST)
ಚುನಾವಣೋತ್ತರ ಸಮೀಕ್ಷೆ ಬಿಡುಗಡೆಗೊಂಡ ಬೆನ್ನಲ್ಲೇ ಕಾಂಗ್ರೆಸ್ ಸಮೀಕ್ಷೆ ವಿರುದ್ಧವೇ ತಿರುಗಿ ಬಿದ್ದಿದೆ.
ಬಿಜೆಪಿ ಪರವಾದ ಫಲಿತಾಂಶ ಸಮೀಕ್ಷೆ ಅವರೇ ಹೇಳಿ ಮಾಡಿಸಿದ ರೀತಿ ವರದಿ ಇದೆ. ಆದರೆ ವಸ್ತು ಸ್ಥಿತಿಯಲ್ಲಿ ಬಿಜೆಪಿ ಸೋಲಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ಸದಾಶಿವನಗರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 300-400 ಸೀಟು ಬರುತ್ತೆ ಎಂದು ಎಕ್ಸಿಟ್ ಪೋಲ್ ಮೂಲಕ ಹೇಳಿಸಿಕೊಂಡು ಬಿಜೆಪಿ ಸಮಾಧಾನ ಪಟ್ಟುಕೊಳ್ಳುವ ಕೆಲಸ ಮಾಡುತ್ತಿದೆ.
ವಾಸ್ತವದಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬರಲಿದೆ ಎಂಬ ಮಾಹಿತಿ ಸಿಕ್ಕಿದೆ. ನೆನ್ನೆ ದೆಹಲಿಯಲ್ಲಿ ನಾಯಕರನ್ನು ಭೇಟಿ ಮಾಡಿದಾಗಲೂ ಇದೇ ಅಭಿಪ್ರಾಯ ಕೇಳಿ ಬಂದಿದೆ.
ಕರ್ನಾಟಕದಲ್ಲಿ 18 ಸೀಟು ಬಿಜೆಪಿಗೆ ಬರಲಿದೆ ಎಂಬ ವರದಿಯನ್ನು ನಂಬಲಾದರೂ ಸಾಧ್ಯವೇ? ಎಂದರು.
ಈ ಬಾರಿ ಸಮೀಕ್ಷಾ ವರದಿ ಸಂಪೂರ್ಣ ತಪ್ಪಿದೆ. ಅದರಲ್ಲೂ ಕರ್ನಾಟಕದ ಸ್ಥಿತಿ ಗೊತ್ತಿದೆ. ಜೆಡಿಎಸ್ - ಕಾಂಗ್ರೆಸ್ ಪಕ್ಷವೇ ಹೆಚ್ಚು ಸ್ಥಾನ ಗಳಿಸಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದ್ರು.
ಇವಿಎಂ ಬೇಡ, ಬ್ಯಾಲೆಟ್ ಪೇಪರ್ ತರುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇವಿಎಂ ಹ್ಯಾಕ್ ಮಾಡುವ ಸಾಧ್ಯತೆಯ ಬಗ್ಗೆ ಉದಾಹರಣೆ ನೋಡಿದ್ದೇವೆ. ಆ ಅನುಮಾನವೂ ಮೂಡಿದೆ ಎಂದರು.