Publish Date: Fri, 10 Dec 2021 (10:31 IST)
Updated Date: Fri, 10 Dec 2021 (10:33 IST)
ಕಾರವಾರ: ದೀಪಾವಳಿ ಸಂದರ್ಭದಲ್ಲಿ ಗೋ ಪೂಜೆ ಮಾಡುವಾಗ ದನದ ಕುತ್ತಿಗೆಗೆ ಹೂವಿನ ಹಾರ ಹಾಕಿ ಪೂಜೆ ಮಾಡುವುದು ನಮಗೆಲ್ಲಾ ಗೊತ್ತಿದೆ. ಆದರೆ ಇಲ್ಲೊಂದು ಕುಟುಂಬ ದನಕ್ಕೆ ಚಿನ್ನದ ಹಾರ ಹಾಕಿ ಫಜೀತಿಗೆ ಸಿಲುಕಿಕೊಂಡಿತ್ತು.
ಶ್ರೀಕಾಂತ್ ಹೆಗಡೆ ಎಂಬವರು ತಮ್ಮ ಮನೆಯ ದನದ ಕುತ್ತಿಗೆಗೆ ಚಿನ್ನದ ಹಾರ ಹಾಕಿದ್ದರು. ಮರುದಿನ ಹಾರ ಹುಡುಕಿದರೂ ಸಿಗಲಿಲ್ಲ. ಕೆಲವು ದಿನ ದನದ ಸೆಗಣಿ ನೋಡುವುದೇ ಕೆಲಸವಾಗಿತ್ತು. ನುಂಗಿದ್ದರೆ ಸೆಗಣಿ ಮೂಲಕ ಹಾರ ಹೊರಬಹುದೆಂದು ಕಾದರು.
ಆದರೆ ಬರದೇ ಹೋದಾಗ ಪಶುವೈದ್ಯರನ್ನು ಸಂಪರ್ಕಿಸಿದರು. ಪಶು ವೈದ್ಯರು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದಾಗ ದನದ ಹೊಟ್ಟೆಯಲ್ಲಿ ಸರ ಇರುವುದು ಕಂಡುಬಂದಿದೆ. ಕೊನೆಗೆ ಶಸ್ತ್ರಚಿಕಿತ್ಸೆ ನಡೆಸಿ ಸರ ಹೊರತೆಗೆಯಲಾಯಿತು. ಆಗ ಸರದ ಒಂದು ತುಂಡು ಕಾಣಲಿಲ್ಲ. ಮತ್ತೆ ಕರುವಿನ ಹೊಟ್ಟೆಯನ್ನು ಪರಿಶೀಲಿಸಿದಾಗ ಇನ್ನೊಂದು ತುಂಡು ಕರುವಿನ ಹೊಟ್ಟೆಯಲ್ಲಿರುವುದು ತಿಳಿದುಬಂದಿದೆ. ಇದೀಗ ಎರಡನ್ನೂ ಹೊರತೆಗೆಯಲಾಗಿದ್ದು, ಚಿನ್ನದ ಹಾರ ಹಾಕಿಸಿಕೊಂಡು ಪಶುವಿನ ನೋವು ಮಾತ್ರ ಯಾರಿಗೂ ಹೇಳಲಾಗದ ಸ್ಥಿತಿಯಂತಾಗಿದೆ.