Publish Date: Tue, 02 Jun 2020 (21:18 IST)
Updated Date: Tue, 02 Jun 2020 (21:19 IST)
ಕ್ವಾರಂಟೈನ್ ನಲ್ಲಿ ಇರುವಂತೆ ತಿಳಿಸಿದ್ದರೂ ಉಲ್ಲಂಘನೆ ಮಾಡಿದ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ.
ಹೊರ ರಾಜ್ಯದಿಂದ ಆಗಮಿಸಿದ ವಲಸೆಗಾರರಿಗೆ ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ಸೂಚನೆ ನೀಡಿದರೂ ಸರ್ಕಾರದ ಆದೇಶವನ್ನು ಪಾಲಿಸದೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಹರಡಿಸುವ ದುರುದ್ದೇಶದಿಂದ ತಾಂಡಾದಲ್ಲಿ ತಿರುಗಾಡುವುದು ಕಂಡುಬಂದಿದೆ.
ಈ ಪ್ರಯುಕ್ತ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಬೀರನಕಲ್ ತಾಂಡಾ ಮತ್ತು ಕಮಲನಾಯಕ ತಾಂಡಾದ 4 ಜನರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ತಿಳಿಸಿದ್ದಾರೆ.
ಹೊರ ರಾಜ್ಯದಿಂದ ಆಗಮಿಸಿದ ವಲಸೆಗಾರರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತಿದೆ. ಸಾಂಸ್ಥಿಕ ಕ್ವಾರಂಟೈನ್ನಲ್ಲಿ ನಿಗದಿತ ಅವಧಿ ಮುಕ್ತಾಯಗೊಂಡ ನಂತರ ಹೋಂ ಕ್ವಾರಂಟೈನ್ ಅವಲೋಕನೆಗಾಗಿ ಕೇಂದ್ರ, ರಾಜ್ಯ ಸರ್ಕಾರದ ಮಾರ್ಗಸೂಚಿ ಹಾಗೂ ಶಿಷ್ಟಾಚಾರದಂತೆ ಸ್ಟಾಂಪಿಂಗ್ ಮತ್ತು ಹೆಲ್ತ್ ಸ್ಕ್ರೀನಿಂಗ್ ಮಾಡಿ ಹೋಂ ಕ್ವಾರಂಟೈನ್ಗಾಗಿ ಕಳುಹಿಸಲಾಗುತ್ತಿದೆ. ಆದರೆ ವಡಗೇರಾ ತಾಲ್ಲೂಕಿನ ಬೀರನಕಲ್ ತಾಂಡಾ ಮತ್ತು ಕಮಲನಾಯಕ ತಾಂಡಾದ 4 ಜನರು ಹೋಂ ಕ್ವಾರಂಟೈನ್ ಉಲ್ಲಂಘಿಸಿದ್ದಾರೆ.
ಆರೋಪಿಗಳ ಮೇಲೆ ಕೇಸ್ ನಂಬರ್: 69/2020, ಕಲಂ: 188, 269, 270 ಐಪಿಸಿ ಅಡಿಯಲ್ಲಿ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.