Publish Date: Fri, 11 Oct 2024 (09:25 IST)
Updated Date: Fri, 11 Oct 2024 (09:27 IST)
ಬೆಂಗಳೂರು: ಬರುವ ಕೆಲವು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ನಡೆಯುವ ಒಳಗೆ ನೂತನ ಮುಖ್ಯಮಂತ್ರಿ ಬರಲಿದ್ದಾರೆ ಎಂದು ಕರ್ನಾಟಕ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಸಿಸಿ ಮಾತನಾಡಿದ ಅವರು, ಮೊನ್ನೆ ನಡೆದ ಹರಿಯಾಣ ರಾಜ್ಯದ ಚುನಾವಣೆ ಬಿಜೆಪಿ ಜಯದಿಂದ ಹೊಸ ಹುರುಪು ಬಂದಿದೆ. ಜಮ್ಮು ಕಾಶ್ಮೀರ ರಾಜ್ಯದಲ್ಲಿ 29 ಸ್ಥಾನಗಳನ್ನು ಗೆಲುವು ಸಾಧಿಸುವ ಮೂಲಕ ಮುಂಬರುವ ಮಹಾರಾಷ್ಟ್ರ ರಾಜ್ಯ ವಿಧಾನಸಭೆ ಚುನಾವಣೆಯ ಗೆಲುವಿನ ಮುನ್ಸೂಚನೆ ಇದು ಎಂದು ವಿಶ್ಲೇಷಿಸಿದರು.
ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದಲ್ಲಿ ಸಿಲುಕಿರುವ ಕಾಂಗ್ರೆಸ್ ಸರ್ಕಾರ ಕೋಮಾದಲ್ಲಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಗುದ್ದಲಿ ಪೂಜೆ ನೆರವೇರುತ್ತಿಲ್ಲ. ಭಷ್ಟಾಚಾರ ಸಾಬೀತಾಗಿ ನಿವೇಶನ ಮರಳಿ ಕೊಟ್ಟು ತಪ್ಪು ಒಪ್ಪಿಕೊಂಡು ಹಾಗೇ ಮುಖ್ಯಮಂತ್ರಿಯವರು ರಾಜೀನಾಮೆ ಕೊಡುತ್ತಾರೆ ಎಂದು ತಿಳಿಸಿದರು.
ಸರ್ಕಾರದ ಜಿಲ್ಲಾ ಸಚಿವರು ಬೆಂಗಳೂರು, ಸ್ವಗೃಹ ಎಂದು ಆರಾಮವಾಗಿ ಅಡ್ಡಾಡುತ್ತಿದ್ದಾರೆ, ಜಿಲ್ಲಾವಾರು ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ £ಡೆಯುತ್ತಿಲ್ಲ. ಎಲ್ಲ ಸಚಿವರು ಸಿದ್ದರಾಮಯ್ಯರೇ ಈ ಅವಧಿಗೆ ಸಿ ಎಂ ಅಂತ ಹೇಳಿದರೂ, ಮುಖ್ಯಮಂತ್ರಿ ಕುರ್ಚಿಗೆ ಹಲವಾರು ಮುಖಂಡರು ಟವಲ್ ಹಾಕುವ ಕೆಲಸ ಮಾತ್ರ ಮಾಡುತ್ತಿದ್ದಾರೆ ಎಂದರು.
ಯಾವ ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆ ನಂತರ ಜನರ ಕೈಗೆ ಸಿಗುತ್ತಿಲ್ಲ. ಜನ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಸನಗೊಂಡಿದ್ದಾರೆ. ನಮ್ಮ ಪಕ್ಷ ವಿರೋಧ ಪಕ್ಷವಾಗಿ ವಾಲ್ಮೀಕಿ ಹಗರಣದ ವಿರುದ್ಧ ಹೋರಾಟ ಮಾಡಿ ಸಚಿವ ನಾಗೇಂದ್ರ ಅವರನ್ನು ರಾಜೀನಾಮೆ ಕೊಡಿಸಲು ಯಶಸ್ವಿಯಾಗಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳೇ ಭಾಗಿಯಾಗಿದ್ದು ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ ಮುಡಾ ನಿವೇಶನ ಪಡೆದಿದ್ದರು. ನಮ್ಮ ಹೋರಾಟದ ಪಲವಾಗಿ ಪಡೆದ ನಿವೇಶನಗಳನ್ನು ಮುಡಾ ಗೆ ವಾಪಸ್ಸು ಕೊಟ್ಟು ತಪ್ಪು ಮಾಡಿದ್ದೇವೆ ಎಂದು ತಾವೇ ಸಾಬೀತು ಮಾಡಿದ್ದಾರೆ. ಇಂದು ಸಿ ಎಮ್. ಸಿದ್ರಾಮಯ್ಯ ರಾಜೀನಾಮೆ ನೀಡುವ ಪರಿಸ್ಥಿತಿಗೆ ಬಂದಿದೆ ಎಂದರು.
ಪಕ್ಷ ಸಂಘಟನೆ ಮಾಡಿ ಇನ್ನೂ ಮೂರು ವರ್ಷ ಉತ್ತಮ ವಿರೋಧ ಪಕ್ಷವಾಗಿ ಜನಪರ ಹೋರಾಟ ಮಾಡಿ ಮುಂದಿನ ಚುನಾವಣೆಯಲ್ಲಿ 150 ಸೀಟುಗಳನ್ನು ಗೆದ್ದು ಎಲ್ಲರ ಸಹಕಾರದಿಂದ ಆಡಳಿತಕ್ಕೆ ಬರುತ್ತೇವೆ ಎಂದರು. ಪಕ್ಷ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದು ಸಂಘಟನೆ ಮಾಡಲು ಅದಕ್ಕೆ ಶ್ರಮಿಸುತ್ತೇನೆ ಎಂದರು.