Publish Date: Tue, 23 Nov 2021 (17:22 IST)
Updated Date: Tue, 23 Nov 2021 (17:24 IST)
ಬೆಂಗಳೂರು : ಕಾಲೇಜಿಗೆ ಕಾರಿನಲ್ಲಿ ಬರುತ್ತಿದ್ದ ಸಹಪಾಠಿ ಶ್ರೀಮಂತನೆಂದು ಭಾವಿಸಿ ಆತನನ್ನು ಅಪಹರಿಸಿ 1.20 ಲಕ್ಷ ರು ಸುಲಿಗೆ ಮಾಡಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿಯನ್ನು ಅನ್ನ ಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಖಾಸಗಿ ಕಾಲೇಜಿನ ಬಿಸಿಎ ಪದವಿ ವಿದ್ಯಾರ್ಥಿಗಳಾದ ಭುವನ್, ಪ್ರಜ್ವಲ್, ಅನಿಲ್ ಮತ್ತು ಬಿಪಿಒ ಉದ್ಯೋಗಿಗಳಾದ ದೀಪು, ನಿಶ್ಚಯ್, ಕ್ಯಾಬ್ ಚಾಲಕ ಪ್ರಜ್ವಲ್ ಬಂಧಿತರು. ಈ ಆರು ಮಂದಿ ನ.18ರಂದು ಪಾಪ ರೆಡ್ಡಿ ಪಾಳ್ಯದ ಬಿಸಿಎ ಪದವಿ ವಿದ್ಯಾರ್ಥಿ ಅಭಿಷೇಕ್ (20) ಎಂಬುವವನ್ನು ಅಪಹರಿಸಿ, ಚಿನ್ನದ ಸರ ಹಾಗೂ ನಗದು ಸುಲಿಗೆ ಮಾಡಿದ್ದರು. ಬಳಿಕ ಯಾರಿಗೂ ಈ ಕೃತ್ಯದ ಬಗ್ಗೆ ಮಾಹಿತಿ ನೀಡದಂತೆ ಎಚ್ಚರಿಕೆ ನೀಡಿ ಅಭಿಷೇಕನನ್ನು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಟೋ ಚಾಲಕನ ಪುತ್ರನಾದ ಅಭಿಷೇಕ್, ವ್ಯಾಸಂಗ ಜತೆಗೆ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ. ಕಾಲೇಜಿಗೆ ಆಗಾಗ್ಗೆ ಸಹೋದರನ ಕಾರು ತೆಗೆದುಕೊಂಡು ಬರುತ್ತಿದ್ದ. ಇದನ್ನು ಕೆಲ ದಿನಗಳಿಂದ ಗಮನಿಸಿದ್ದ ಆರೋಪಿಗಳಾದ ಭುವನ್ ಮತ್ತು ಪ್ರಜ್ವಲ್, ಅಭಿಷೇಕ್ನನ್ನು ಅಪಹರಿಸಿ ಹಣ ಸುಲಿಗೆ ಮಾಡಲು ಸಹಚರರೊಂದಿಗೆ ಸೇರಿಕೊಂಡು ಸಂಚು ರೂಪಿಸಿದ್ದರು. ಅದರಂತೆ ನ.18ರ ಬೆಳಗ್ಗೆ ಕಾರಿನಲ್ಲಿ ಕಾಲೇಜಿಗೆ ಬಂದಿದ್ದ ಅಭಿಷೇಕ್, ಇಬ್ಬರು ಸ್ನೇಹಿತರ ಜತೆ ಮಾತನಾಡಿಕೊಂಡು ನಿಂತಿದ್ದ. ಈ ವೇಳೆ ಅಭಿಷೇಕ್ ಚಲನವಲನದ ಮೇಲೆ ನಿಗಾವಹಿಸಿದ್ದ ಆರೋಪಿಗಳು, ಅಭಿಷೇಕ್ ಜತೆಯಲ್ಲಿದ್ದ ಸ್ನೇಹಿತರು ಹೋಗುತ್ತಿದಂತೆ ಇಬ್ಬರು ಮಂಕಿ ಕ್ಯಾಪ್ ಧರಿಸಿಕೊಂಡು ಬಂದು ತಲೆಗೆ ಹಲ್ಲೆ ಮಾಡಿ ಅಭಿಷೇಕ್ನ ಕಾರಿನಲ್ಲೇ ಅಪಹರಿಸಿದ್ದರು.