Publish Date: Sat, 28 Jul 2018 (14:41 IST)
Updated Date: Sat, 28 Jul 2018 (14:46 IST)
ಇಡೀ ದೇಶದ ಜನ ಖಗ್ರಾಸ ಚಂದ್ರಗ್ರಹಣದ ಕುತೂಹಲದತ್ತಾ ದೃಷ್ಠಿ ಬೀರಿದ್ದರು. ಆದ್ರೆ ತಿಪಟೂರು ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇರಿ ಸದಸ್ಯರೆಲ್ಲಾ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ತಾಲೂಕಿನಲ್ಲೆ ಅತಿದೊಡ್ಡ ಪಂಚಾಯಿತಿ ಎಂದು ಕರೆಸಿಕೊಳ್ಳುವ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 34 ಸದಸ್ಯರಿದ್ದಾರೆ. ಈ ಪಂಚಾಯಿತಿ ಪಿ.ಡಿ ಒ ಶಿವರಾಜ್ ಅಕ್ರಮ ಆರೋಪದ ಮೇಲೆ ಅಮಾನತುಗೊಂಡು ವಾರಗಳೆ ಕಳೆದಿವೆ. ಅಷ್ಟೇ ಅಲ್ಲಾ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್, ಕಾರ್ಯದರ್ಶಿ ಹುದ್ದೆ ಕೂಡ ನೇಮಕಾತಿಯಾಗಿಲ್ಲ. ಆದ್ದರಿಂದ ಪಂಚಾಯಿತಿ ವತಿಯಿಂದ ಯಾವ ಅಭಿವೃದ್ದಿ ಕಾರ್ಯ ನಡೆಯುತ್ತಿಲ್ಲ ಅನ್ನೋ ಆರೋಪ ಈ ಸದಸ್ಯರದ್ದಾಗಿದೆ.
ಅಮಾನತುಗೊಂಡ ಪಿಡಿಒ ವಿರುದ್ಧ ಸಮಗ್ರ ತನಿಖೆಯಾಗಬೇಕು. ಅವರ ಅಕ್ರಮಕ್ಕೆ ತಾ.ಪಂ. ಇಒ ಷಡಾಕ್ಷರಿ ಕುಮ್ಮಕ್ಕು ನೀಡಿರುವ ಸಂಶಯವಿದ್ದು, ಕೂಡಲೇ ಅವರ ವಿರುದ್ಧ ಕೂಡ ತನಿಖೆ ನಡೆಸಬೇಕು. ಗ್ರಾ.ಪಂ. ಪಿಡಿಒ ನೇಮಕ ಮಾಡಲು ಒತ್ತಾಯಿಸಿ ಅಹೋರಾತ್ರಿ ಧರಣಿಯನ್ನು ಪಂಚಾಯಿತಿ ಸದಸ್ಯರು ನಡೆಸುತ್ತಿದ್ದಾರೆ.