Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚಿಕ್ಕಬಳ್ಳಾಪುರ : ತಾಲೂಕಿನ ಸೂಲಿಕುಂಟೆ ಗ್ರಾಮದಲ್ಲಿ ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಜಮೀನು ವಿವಾದದ ಹಿನ್ನೆಲೆ ಒಂದೇ ಸೀರೆಯಲ್ಲಿ ಗಂಡ, ಹೆಂಡತಿ ಇಬ್ಬರು ನೇಣು ಬಿಗಿದುಕೊಂಡು ಏಕಕಾಲದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.
ಗ್ರಾಮದ ಚಂದ್ರಶೇಖರ್(32) ಹಾಗೂ ಶಶಿಕಲಾ(25) ಮೃತ ದುರ್ದೈವಿಗಳು. ಮನೆಯಲ್ಲಿನ ಮೇಲ್ಛಾವಣಿಯ ಸಿಮೆಂಟ್ ಶೀಟ್ ಕೆಳಗೆ ಅಡ್ಡಲಾಗಿ ಹಾಕಿರುವ ಕಬ್ಬಿಣದ ಪೈಪ್ಗೆ ಒಂದೇ ಸೀರೆಯನ್ನು ಎರಡು ಕಡೆ ನೇತು ಹಾಕಿ ಸೀರೆಯ ಎರಡು ಬದಿಗಳ ಕಡೆ ಒಬ್ಬೊಬ್ಬರು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆ ಕುರಿತಂತೆ ಸಂಬಂಧಿಕರು ಹೇಳುವ ಪ್ರಕಾರ ಗ್ರಾಮದ ಸಂಬಂಧಿಕರೇ ಆದ ಕುಂಟನಾರಾಯಣಪ್ಪ 10 ಗುಂಟೆ ಜಮೀನನ್ನು ಮೃತ ಚಂದ್ರಶೇಖರ್ ತಾಯಿ ಜಯಮ್ಮಗೆ ಮಾರಾಟ ಮಾಡಿದ್ದರು.
ಆದರೆ ಅದೇ ಜಮೀನನ್ನು ಕುಂಟ ನಾರಾಯಣಪ್ಪ ಹನುಮಂತಪ್ಪ ಎಂಬವರಿಗೆ ನೋಂದಣಿ ಮಾಡಿದ್ದಾರಂತೆ. ಇದರಿಂದ ಕೋರ್ಟ್ ಕಚೇರಿ ಅಂತ ಅಲೆದಾಡಿದ್ದ ಚಂದ್ರಶೇಖರ್ ಮನನೊಂದು ಶನಿವಾರ ಹೆಂಡತಿ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ತಿಳಿಸಿದ್ದಾರೆ.
ಇದೀಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ಸಂಬಂಧ ದೂರು ದಾಖಲಾಗಿದೆ. ಇನ್ನೂ ಇಂದು ಸಹ ಗ್ರಾಮದಲ್ಲಿ ಇದೇ ಜಮೀನು ವಿಚಾರವಾಗಿ ನ್ಯಾಯ ಪಂಚಾಯತಿಗೂ ನಿರ್ಧಾರ ಮಾಡಲಾಗುತ್ತಿತ್ತು. ಆದರೆ ನ್ಯಾಯ ಪಂಚಾಯತಿಗೂ ಮುನ್ನವೇ ದಂಪತಿ ನೇಣಿಗೆ ಶರಣಾಗಿದ್ದಾರೆ. ಇನ್ನೂ ಮಕ್ಕಳಾಗಲಿಲ್ಲ ಎಂದು ನೊಂದು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ.
ಮದುವೆಯಾಗಿ 4 ವರ್ಷ ಕಳೆದಿದ್ದು, ಗಂಡ ಹೆಂಡತಿ ಅನ್ಯೋನ್ಯವಾಗಿದ್ದರು ಅಂತ ಹೇಳಿದ್ದಾರೆ.
ಶನಿವಾರ ಸಂಜೆಯಾದರೂ ಮನೆಯಿಂದ ಗಂಡ ಹಾಗೂ ಹೆಂಡತಿ ಹೊರಬಾರದ ಕಾರಣ ಅಕ್ಕ ಪಕ್ಕದ ಮನೆಯವರು ಕಿಟಕಿ ಮೂಲಕ ಇಣುಕಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.