Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ: ತನ್ನ ಮೇಲೆ ನಡೆದಿದ್ದ ಅತ್ಯಾಚಾರ ವಿಚಾರ ಬಹಿರಂಗವಾದ ಹಿನ್ನಲೆಯಲ್ಲಿ ಮಾನಕ್ಕೆ ಅಂಜಿ 16 ವರ್ಷದ ಅಪ್ರಾಪ್ತ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉತ್ತರಪ್ರದೇಶದ ಬರೇಲಿಯ 16 ವರ್ಷದ ಯುವತಿ ಮೇಲೆ ಅದೇ ಗ್ರಾಮದ 22 ವರ್ಷದ ಯುವಕ ಅತ್ಯಾಚಾರವೆಸಗಿದ್ದ. ಯುವತಿ ಈ ವಿಚಾರವನ್ನು ಮೊದಲು ಯಾರಿಗೂ ಹೇಳಿರಲಿಲ್ಲ. ಬಳಿಕ ಧೈರ್ಯ ಮಾಡಿ ತನ್ನ ಸಹೋದರನಿಗೆ ಹೇಳಿದ್ದಳು. ಹಾಗಿದ್ದರೂ ಮಾನ ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ನೀಡಿರಲಿಲ್ಲ.
ಇದಾದ ಬಳಿಕ ಆರೋಪಿ ದೆಹಲಿಗೆ ಪರಾರಿಯಾಗಿದ್ದ. ಇತ್ತೀಚೆಗೆ ಗ್ರಾಮದಲ್ಲಿದ್ದ ತನ್ನ ಸ್ನೇಹಿತನಿಗೆ ಕರೆ ಮಾಡಿದಾಗ ತಾನು ಮಾಡಿದ್ದ ಕುಕೃತ್ಯವನ್ನು ವಿವರಿಸಿದ್ದ. ಈ ವೇಳೆ ಆ ಸ್ನೇಹಿತ ಕರೆ ರೆಕಾರ್ಡ್ ಮಾಡಿಕೊಂಡಿದ್ದ. ಬಳಿಕ ಆ ಅಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದ. ಇದು ಬಹಿರಂಗವಾಗುತ್ತಿದ್ದಂತೇ ಯುವತಿ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗ ಯುವತಿಯ ಸಹೋದರ ಪೊಲೀಸರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾನೆ.