Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೀದರ್ : ಬಹುತೇಕ ಜನರು ದಸಾ ಹಬ್ಬದ ಸಂಭ್ರಮದಲ್ಲಿದ್ದಾರೆ. ಕೆಲವರು ಉಪವಾಸ ವ್ರತಾಚರಣೆಯಲ್ಲಿ ತೊಡಗಿದ್ದಾರೆ. ದೇವಿ ಮಂದಿರಗಳಲ್ಲಿ ವಿಶೇಷ ಪೂಜೆ ಹಾಗೂ ಭಜನೆಗಳು ನಡೆದಿವೆ.
ವರುಣದೇವ ಅಬ್ಬರಿಸಿ ತೋಟಗಾರಿಕೆ ಬೆಳೆಗಳಿಗೆ ನಷ್ಟ ಉಂಟು ಮಾಡಿದ್ದಾನೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಹಜವಾಗಿ ತರಕಾರಿಗಳ ಬೆಲೆಗಳಲ್ಲಿ ಹೆಚ್ಚಳ ಆಗಿದೆ.
ಅಡುಗೆ ರುಚಿ ಹೆಚ್ಚಿಸುವ ಟೊಮೆಟೊ ಬೆಲೆ ಪ್ರತಿ ಕ್ವಿಂಟಲ್ಗೆ ₹ 6 ಸಾವಿರ ಹಾಗೂ ಬೀನ್ಸ್ ₹ 2 ಸಾವಿರ ಹೆಚ್ಚಾಗಿದೆ. ಹಸಿ ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ ಸಹ ಖಾಟು ಹೆಚ್ಚಿಸಿಕೊಂಡಿವೆ. ತರಕಾರಿ ರಾಜ ಬದನೆಕಾಯಿ ಮಾರುಕಟ್ಟೆಯಲ್ಲಿ ಮತ್ತೆ ಘನತೆ ಹೆಚ್ಚಿಸಿಕೊಂಡಿದ್ದಾನೆ.
ಟೊಮೆಟೊ ಬೆಲೆಯಲ್ಲಿ ಪ್ರತಿ ಕ್ವಿಂಟಲ್ಗೆ ₹ 6 ಸಾವಿರ, ಬೀನ್ಸ್ ₹ 3 ಸಾವಿರ, ಗಜ್ಜರಿ ₹ 2 ಸಾವಿರ, ಬೀಟ್ರೂಟ್ ₹ 1,500 ಮೆಣಸಿನಕಾಯಿ, ನುಗ್ಗೆಕಾಯಿ, ಬದನೆಕಾಯಿ ₹ 1 ಸಾವಿರ, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಹಿರೇಕಾಯಿ, ಬೆಂಡೆಕಾಯಿ, ಹೂಕೋಸು, ಕೊತಂಬರಿ ಬೆಲೆ ₹ 500 ಹೆಚ್ಚಳವಾಗಿದೆ.
ವರುಣದೇವನ ಅವಕೃಪೆಗೆ ಒಳಗಾಗಿ ಮದುಡಿಕೊಂಡ ಎಲೆಕೋಸು ಹಾಗೂ ಸಬ್ಬಸಗಿ ಬೆಲೆ ಕುಸಿದಿದೆ, ತೊಂಡೆಕಾಯಿ, ಮೆಂತೆ ಸೊಪ್ಪು, ಕರಿಬೇವು ಹಾಗೂ ಪಾಲಕ್ ಬೆಲೆ ಮಾತ್ರ ಸ್ಥಿರವಾಗಿದೆ.
ಅತಿವೃಷ್ಟಿಯಿಂದ ತರಕಾರಿ ಹಾಳಾಗಿದೆ. ಹೆಚ್ಚು ತರಕಾರಿ ಮಾರುಕಟ್ಟೆ ಬಂದಿಲ್ಲ. ಸದ್ಯ ನವರಾತ್ರಿ ಇರುವ ಕಾರಣ ಬೆಲೆ ಹೆಚ್ಚಳವಾಗಿದೆ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.