Publish Date: Wed, 01 Feb 2023 (10:24 IST)
Updated Date: Wed, 01 Feb 2023 (11:04 IST)
ಬೆಂಗಳೂರು : ಬುಧವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 2023-24ನೇ ಸಾಲಿನ ಕೇಂದ್ರ ಬಜೆಟ್ಗೆ ವೇದಿಕೆ ಸಿದ್ಧವಾಗಿದೆ.
ಸಂಸತ್ ಭವನದಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಮಾಡಲಿದ್ದಾರೆ. 2024ರ ಲೋಕಸಭಾ ಚುನಾವಣೆಯ ಮುನ್ನ ನಡೆಯುವ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಆಗಿರುವುದರಿಂದ ಜನರು ಬಹು ನೀರಿಕ್ಷೆಗಳನ್ನು ಹೊಂದಿದ್ದಾರೆ.
ಮಹಿಳೆಯ ಪರವಾಗಿ ಬಜೆಟ್ ಇರಲಿ
ಪ್ರತಿಯೊಬ್ಬರ ಅದರಲ್ಲೂ ಮಧ್ಯಮ ವರ್ಗದವರ, ಬಡವರ ಮಾತುಗಳು ಇವು. ಗ್ಯಾಸ್ ಬೆಲೆ 1,100 ರೂ. ಆಗಿದೆ. ಸಬ್ಸಿಡಿ ಎಂದು ಹೇಳಿ ಅದು ಬರುತ್ತಿಲ್ಲ. ಮನೆಗೆ ಬೇಕಾದ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ ಪ್ರತಿನಿತ್ಯದ ಜೀವನಕ್ಕೆ ಸಾವಿರಾರು ರೂ. ಬೇಕಾಗುತ್ತಿದೆ. ಸರ್ಕಾರ ಈ ಬಾರಿಯಾದರೂ ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಿಸಿ ಎಂಬುದು ಮಹಿಳೆಯರ ನಿರೀಕ್ಷೆಯಾಗಿದೆ.
ಬಡವರ ಪರವಾಗಿ ನಿಲ್ಲಿ, ತೆರಿಗೆ ಕಡಿಮೆ ಮಾಡಿ
ಬಡವರು, ದಿನಗೂಲಿ ನೌಕರರು ಇಂದಿನ ಪರಿಸ್ಥಿತಿಯಲ್ಲಿ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಆಟೋ ಚಾಲಕರಿಗೆ ಇಲ್ಲಿಯವರೆಗೆ ಯಾವುದೇ ಸರ್ಕಾರ ಯಾವುದೇ ಕೊಡುಗೆ ನೀಡಿಲ್ಲ. ಗ್ಯಾಸ್, ಪೆಟ್ರೋಲ್, ಡೀಸೆಲ್ ಎಲ್ಲದರ ಬೆಲೆ ಹೆಚ್ಚಾಗಿದೆ. ಇದಕ್ಕೆ ಬಜೆಟ್ನಲ್ಲಿ ಪರಿಹಾರ ಕೊಡಿಸಲು ಒತ್ತಾಯಿಸಿದ್ದಾರೆ.
ಮಹಿಳೆಯರ ಶಿಕ್ಷಣ ರಕ್ಷಣೆಗೆ ಒತ್ತು
ಮಹಿಳೆಯ ಹಾಗೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೆರವು ನೀಡಿ, ಹೆಣ್ಣು ಮಕ್ಕಳ ಶಿಕ್ಷಣವನ್ನು ಉಚಿತವಾಗಿ ನೀಡಿ. ಆಗ ಶೇ.100 ರಷ್ಟು ಸಾಕ್ಷರತೆ ಪ್ರಮಾಣ ಬರಲಿದೆ. ಜೊತೆಗೆ ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ. ಇಡೀ ವಿಶ್ವದ ಜನರು ಬೆಂಗಳೂರಿನ ಕಡೆ ಬರುತ್ತಿದ್ದಾರೆ. ಬೇಸಿಕ್ ನೀಡ್ಸ್ ಬಗ್ಗೆ ಗಮನ ಹರಿಸಿ.