Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಪ್ರಗತಿಯ ಮುನ್ನೋಟ ಎಂದೇ ಪರಿಗಣಿಸಲ್ಪಡುವ ರಾಜ್ಯ ಬಜೆಟ್ ಮಂಡನೆ ಆಗಿದೆ.
ಮುಖ್ಯಮಂತ್ರಿ ಮೊದಲ ಬಾರಿಗೆ ಅಯವ್ಯಯ ಮಂಡಿಸಿದ್ದಾರೆ. ವಿತ್ತೀಯ ಕೊರತೆ ನಡುವೆಯೂ ಬೊಮ್ಮಾಯಿ ಬಜೆಟ್ ಜನಪ್ರಿಯ ಹಳಿ ಮೇಲೆಯೇ ಸಾಗಿದೆ. ಇದಕ್ಕೆ ಪ್ರಮುಖ ಕಾರಣ ವರ್ಷದೊಪ್ಪತ್ತಿನಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆ ಎಂದರೇ ತಪ್ಪಾಗಲಿಕ್ಕಿಲ್ಲ.
ಯಾವುದೇ ತೆರಿಗೆ ಭಾರ ಹೇರದೇ, ಹಲವು ಜನಪರ ನಿಲುವುಗಳನ್ನು ಕೈಗೊಳ್ಳಲಾಗಿದೆ. ಮಹತ್ವದ್ದು ಎನಿಸುವ ಯಾವುದೇ ದೊಡ್ಡ ಘೋಷಣೆಗಳು ಹೊರಹೊಮ್ಮಿಲ್ಲ. ಆದರೆ ಬಹುಸಂಖ್ಯಾತ ಹಿಂದೂಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಲವು ಘೋಷಣೆಗಳನ್ನು ಬಜೆಟ್ ಮೂಲಕ ಬೊಮ್ಮಾಯಿ ಪ್ರಕಟಿಸಿದ್ದಾರೆ.
2,61,977 ಕೋಟಿ ರೂ.ಆದಾಯನ್ನು ನಿರೀಕ್ಷಿಸಿದ್ದು, ಬಜೆಟ್ನಲ್ಲಿ ವಿವಿಧ ಯೋಜನೆಗಳಿಗೆ 2,65,720 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಬಹುಸಂಖ್ಯಾತ ಹಿಂದೂಗಳ ಪ್ರಮುಖ ಬೇಡಿಕೆಯಾದ, ಮುಜುರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಸ್ವಾಯತ್ತತೆ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮೂಲಕ ಅಧಿಕೃತ ಘೋಷಣೆ ಮಾಡಿದ್ದಾರೆ.
ದೇಗುಲಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತ ಮಾಡುವಂತೆ ಭಕ್ತರು ಇಟ್ಟಿದ್ದ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ ಎಂದು ಸಿಎಂ ಪ್ರಕಟಿಸಿದರು.