Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಳಗಾವಿ : ಮೈಲಿ ಬೇನೆಯ ನಿಯಂತ್ರಣಕ್ಕೆ ನೀಡುವ ರೂಬೆಲ್ಲಾ ಚುಚ್ಚು ಮದ್ದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮೂರು ಕಂದಮ್ಮಗಳನ್ನು ಬಲಿ ಪಡೆದಿದೆ.
ಚುಚ್ಚುಮದ್ದು ಪಡೆದು ಅಸ್ವಸ್ಥಗೊಂಡಿದ್ದ ಮೂವರು ಮಕ್ಕಳು ಇದೀಗ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ್ (13 ತಿಂಗಳು), ಮಧು ಉಮೇಶ್ ಕುರಗುಂದಿ (14 ತಿಂಗಳು) ಹಾಗೂ ಮಲ್ಲಾಪುರ ಗ್ರಾಮದ ಚೇತನ (15 ತಿಂಗಳು) ಮೃತ ಕಂದಮ್ಮಗಳೆಂದು ತಿಳಿದು ಬಂದಿದೆ.
ರಾಮದುರ್ಗ ತಾಲೂಕಿನ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜ.11 ಮತ್ತು 12 ರಂದು ಒಟ್ಟು 25 ಮಕ್ಕಳಿಗೆ ಲಸಿಕೆ ನೀಡಲಾಗಿತ್ತು. ಇದರಲ್ಲಿ 6 ಮಕ್ಕಳಿಗೆ ರೂಬೆಲ್ಲಾ ಚುಚ್ಚುಮದ್ದು ನೀಡಿದ್ದರು.
ರೂಬೆಲ್ಲಾ ಚಚ್ಚು ಮದ್ದು ಪಡೆದ ಮಕ್ಕಳಲ್ಲಿ ಮೂರು ಮಕ್ಕಳು ಮೃತಪಟ್ಟಿದ್ದಾರೆ.
ಇನ್ನೊಂದು ಮಗುವಿನ ಪರಿಸ್ಥಿತಿ ಗಂಭೀರವಾಗಿದ್ದು, ಬೆಳಗಾವಿಯ ಬಿಮ್ಸ್ನಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇಡೀ ತಾಲೂಕಿನಾದ್ಯಂತ ಎಲ್ಲಾ ಪಿಎಚ್ಸಿಗಳಲ್ಲಿ ಮಕ್ಕಳಿಗೆ ವಿವಿಧ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಸಾಲಹಳ್ಳಿ ಪಿಎಚ್ಸಿಯಲ್ಲಿ ಮಾತ್ರ ಇಂಥ ದುರ್ಘಟನೆ ನಡೆದಿದೆ.
ಮೂವರು ಮಕ್ಕಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಅನ್ಯಾಯವಾಗಿ ನಮ್ಮ ಮಕ್ಕಳನ್ನು ಬಲಿತೆಗೆದುಕೊಂಡರು ಎಂದು ಹೆತ್ತವರು ಕಣ್ಣೀರು ಸುರಿಸುತ್ತಿದ್ದಾರೆ. ಇತ್ತ ಚುಚ್ಚು ಮದ್ದು ಪಡೆದು ಗಂಭೀರಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಪೋಷಕರಲ್ಲೂ ಈ ಘಟನೆ ಆತಂಕವನ್ನು ಸೃಷ್ಟಿಸಿದೆ.