Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಶ್ರೀನಗರ : ಮಸೀದಿಯಲ್ಲಿ ಧ್ವನಿವರ್ಧಕ ಹಾಗೂ ಹಲಾಲ್ ಮಾಂಸವನ್ನು ಯಾಕೆ ನಿಷೇಧಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ಇಂದಿನ ಭಾರತವು ಜಮ್ಮು ಮತ್ತು ಕಾಶ್ಮೀರವನ್ನು ಒಪ್ಪಿಕೊಂಡ ದೇಶವಾಗಿಲ್ಲ. ಈ ದೇಶದಲ್ಲಿ ಮುಸ್ಲಿಮರ ಧಾರ್ಮಿಕ ಹಕ್ಕುಗಳು ರಕ್ಷಣೆಯಾಗುವುದಿಲ್ಲ ಎಂದು ಜನರಿಗೆ ತಿಳಿದಿದ್ದರೆ ಈ ರೀತಿಯ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಹಿಜಬ್, ಹಲಾಲ್, ಧ್ವನಿವರ್ಧಕ ಮೊದಲಾದ ವಿಚಾರಗಳಿಗೆ ಎದ್ದಿರುವ ಕೋಮುಗಲಭೆ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದು ಧರ್ಮವನ್ನು ಸಮಾನವಾಗಿ ಪರಿಗಣಿಸುವ ದೇಶಕ್ಕೆ ನಾವು ಸೇರಿಕೊಂಡೆವು. ಒಂದು ಧರ್ಮಕ್ಕೆ ಪ್ರಾಶಸ್ತ್ಯ ಸಿಗುತ್ತದೆ ಮತ್ತು ಇತರರನ್ನು ಹತ್ತಿಕ್ಕಲಾಗುತ್ತದೆ ಎಂದು ನಮಗೆ ಆಗ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಅದು ತಿಳಿದಿದ್ದರೆ ಬಹುಶಃ ನಮ್ಮ ನಿರ್ಧಾರ ಬೇರೆಯೇ ಆಗುತ್ತಿತ್ತು. ಪ್ರತಿಯೊಂದು ಧರ್ಮಕ್ಕೂ ಸಮಾನ ಹಕ್ಕಿದೆ ಎಂದು ಹೇಳಿದ ನಂತರ ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ನಾವು ಮಸೀದಿಗಳಲ್ಲಿ ಏಕೆ ಧ್ವನಿವರ್ಧಕಗಳನ್ನು ಬಳಸಬಾರದು? ಇತರ ಧಾರ್ಮಿಕ ಸ್ಥಳಗಳಿಗೆ ಅದನ್ನು ಬಳಸುವ ಹಕ್ಕಿದ್ದರೆ, ಮಸೀದಿಗಳಿಗೆ ಏಕೆ ಬಳಸಬಾರದು ಎಂದು ಪ್ರಶ್ನಿಸಿದ್ದಾರೆ.