Publish Date: Sun, 11 Jul 2021 (09:30 IST)
Updated Date: Sun, 11 Jul 2021 (09:35 IST)
ಲಕ್ನೋ: ಜನನಿಯಂತ್ರಣ ಮಾಡಲು ಹೊಸ ತಂತ್ರ ರೂಪಿಸಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಎರಡಕ್ಕಿಂತ ಹೆಚ್ಚು ಮಕ್ಕಳಾದರೆ ಸರ್ಕಾರಿ ಸೌಲಭ್ಯಗಳನ್ನೇ ಕಡಿತಗೊಳಿಸುವ ಹೊಸ ನೀತಿಯೊಂದನ್ನು ಜಾರಿಗೆ ತರಲಿದೆ.
ಈ ಬಗ್ಗೆ ಕರಡು ನೀತಿ ಬಿಡುಗಡೆಯಾಗಿದ್ದು, ಜು.19 ರೊಳಗಾಗಿ ಆಕ್ಷೇಪ ಸಲ್ಲಿಸುವುದಿದ್ದರೆ ಸಲ್ಲಿಸಬಹುದಾಗಿದೆ. ಎರಡು ಮಕ್ಕಳಿಗಿಂತ ಹೆಚ್ಚಾದರೆ ಸರ್ಕಾರಿ ಸೌಲಭ್ಯಗಳು ಕಟ್ ಆಗಲಿದೆ. ಎರಡು ಅಥವಾ ಒಂದೇ ಮಗುವಿದ್ದರೆ ಸರ್ಕಾರದಿಂದ ಪ್ರೋತ್ಸಾಹಕವಾಗಿ ಸೌಲಭ್ಯಗಳು ಲಭಿಸಲಿವೆ.
ಒಂದೇ ಮಗುವಿದ್ದರೆ ದಂಪತಿಗೆ ಉಚಿತ ವೈದ್ಯಕೀಯ ವಿಮೆ, ಮಗುವಿಗೆ 20 ವರ್ಷ ತುಂಬುವವರೆಗೆ ವಿಮೆ, ಐಐಎಂ, ಏಮ್ಸ್ ಗಳಲ್ಲಿ ಆದ್ಯತೆ ಮೇರೆಗೆ ಉಚಿತ ಪ್ರವೇಶ, ಪದವಿ ಹಂತದವರೆಗೆ ಮಗುವಿಗೆ ಉಚಿತ ಶಿಕ್ಷಣ, ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ ಸಿಗಲಿದೆ. ಅದೇ ರೀತಿ ಎರಡು ಮಕ್ಕಳಿದ್ದರೆ ಮನೆ ಕಟ್ಟುವಾಗ ಸರಳ ಸಾಲ, ನೀರು, ವಿದ್ಯುತ್ ದರ, ಮನೆ ತೆರಿಗೆ ಮನ್ನಾ, ಸರ್ಕಾರಿ ನೌಕರರಿಗೆ ಹೆಚ್ಚುವರಿ ಬಡ್ತಿ, 12 ತಿಂಗಳ ವೆತನ, ಭತ್ಯೆ ಸಹಿತ ರಜೆ, ಉಚಿತ ವೈದ್ಯಕೀಯ ಸೌಲಭ್ಯಗಳು, ಪತ್ನಿಗೆ ವಿಮೆ ಇತ್ಯಾದಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದಲ್ಲದೆ ಹೆಣ್ಣು ಮಗುವಿಗೆ 1 ಲಕ್ಷ ರೂ. ಪ್ರೋತ್ಸಾಹಕ ಧನ, ಗಂಡು ಮಗುವಾದರೆ ಬಡವರಿಗೆ ಒಂದೇ ಬಾರಿಗೆ 80 ಸಾವಿರ ರೂ. ನಗದು ಸಿಗಲಿದೆ.