Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ತಿರುವನಂತಪುರಂ : ಕೇಳರದ ಆಡಳಿತಾರೂಢ ಸಿಪಿಐ(ಎಂ)ನ ರಾಜ್ಯ ಪ್ರಧಾನ ಕಚೇರಿಗೆ ಗುರುವಾರ ತಡರಾತ್ರಿ ಬಾಂಬ್ ಎಸೆದು ಸ್ಫೋಟಿಸಲಾಗಿದೆ.
ಪಕ್ಷದ ಕಚೇರಿಯ ಮುಖ್ಯ ಗೇಟ್ ಮುಂದೆ ಬಾಂಬ್ ಸ್ಫೋಟಗೊಂಡಿದೆ. ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಪಕ್ಷದ ಹಿರಿಯ ನಾಯಕರು ಕಚೇರಿ ಬಳಿ ಧಾವಿಸಿದರು. ದಾಳಿಯ ವೇಳೆ ಹಲವು ಸಿಪಿಐ(ಎಂ) ಮುಖಂಡರು ಪಕ್ಷದ ಕಚೇರಿ ಬಳಿಯ ಅಪಾರ್ಟ್ಮೆಂಟ್ನಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಬಾಂಬ್ ಎಸೆದು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ವರದಿಯನ್ನು ಸಲ್ಲಿಸುವ ಸಮಯದಲ್ಲಿ ಪೊಲೀಸರಿಂದ ಯಾವುದೇ ಅಧಿಕೃತ ಹೇಳಿಕೆ ಇರಲಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಕೇರಳದಲ್ಲಿ ಹಿಂಸಾಚಾರವನ್ನು ಪ್ರೋತ್ಸಾಹಿಸುವ ನಾಯಕತ್ವವನ್ನು ಕಾಂಗ್ರೆಸ್ ಹೊಂದಿದೆ. ನಾವು ಪ್ರಜಾಸತ್ತಾತ್ಮಕ ಮತ್ತು ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಸಿಪಿಐ(ಎಂ) ಪಾಲಿಟ್ಬ್ಯುರೊ ಸದಸ್ಯ ಎ.ವಿಜಯರಾಘವನ್ ಹೇಳಿದ್ದಾರೆ.
ಘಟನೆಯ ಅರ್ಧ ಗಂಟೆಯ ನಂತರ ನಗರದಲ್ಲಿ ಸಿಪಿಐ(ಎಂ) ಮತ್ತು ಡಿವೈಎಫ್ಐ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.