Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ತಿರುವನಂತಪುರಂ : ಪಿಎಫ್ಐ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಶುಕ್ರವಾರ 18 ಮಂದಿಯನ್ನು ಬಂಧಿಸಿದ್ದಾರೆ.
ಕೇರಳದ ಆಲಪ್ಪುಳದಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರ್ಯಾಲಿ ವೇಳೆ ಅಪ್ರಾಪ್ತ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆಯನ್ನು ಕೂಗಿದ್ದನು. ಈ ಘೋಷಣೆಯನ್ನು ಪುನರುಚ್ಚಿಸಿದ್ದವರನ್ನು ಇಬ್ಬರನ್ನು ಈ ಮುನ್ನ ಪೊಲೀಸರು ಬಂಧಿಸಿದ್ದರು. ಅಲ್ಲದೇ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇರಳ ಹೈಕೋರ್ಟ್ ಪೊಲೀಸರಿಗೆ ಸೂಚಿಸಿತ್ತು.
ಮೇ 21ರಂದು ನಗರದಲ್ಲಿ ನಡೆದ ಪಿಎಫ್ಐ ಗಣರಾಜ್ಯ ಉಳಿಸಿ ರ್ಯಾಲಿ ವೇಳೆ ವ್ಯಕ್ತಿಯೋರ್ವ ಅಪ್ರಾಪ್ತ ಬಾಲಕನನ್ನು ಹೆಗಲ ಮೇಲೆ ಕುರಿಸಿಕೊಂಡಿದ್ದನು. ಈ ವೇಳೆ ಬಾಲಕ, ಹಿಂದೂಗಳು ಅಂತ್ಯಕ್ರಿಯೆ ವೇಳೆ ಅಕ್ಕಿ ಇಡಬೇಕು ಮತ್ತು ಕ್ರಿಶ್ಚಿಯನ್ನರು ಅವರ ಅಂತ್ಯಕ್ರಿಯೆ ವೇಳೆ ಧೂಪ ಹಾಕಬೇಕು. ನೀವು ಮಾರ್ಯದೆಯಿಂದ ಬದುಕುವುದಾದರೆ, ನಮ್ಮ ನೆಲದಲ್ಲಿ ಬದುಕಬಹುದು.
ನೀವು ಯೋಗ್ಯವಾಗಿ ಬದುಕದಿದ್ದರೆ, ನಮಗೂ ಆಜಾದಿ (ಸ್ವಾತಂತ್ರ್ಯ) ತಿಳಿದಿದೆ ಎಂಬ ಪ್ರಚೋದನಾಕಾರಿ ಘೋಷಣೆ ಕೂಗಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೇರಳದಲ್ಲಿ ವಾಸಿಸುವ ಹಿಂದೂ ಮತ್ತು ಕ್ರಿಶ್ಚಿಯನ್ ಜನಸಂಖ್ಯೆಗೆ ಇದು ನೇರವಾಗಿ ಎಚ್ಚರಿಕೆ ನೀಡಿದಂತೆ ಆಗಿದೆ.