Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಶಾಸ್ತ್ರೀಯ ಸಂಗೀತಕ್ಕೆ ಅದರದೆ ಆದ ವೇದಿಕೆ, ನಿಯಮ ಇದೆ, ಹಾಗಾಗಿ ಎಲ್ಲೆಂದರಲ್ಲಿ ಹಾಡುವಂತಿಲ್ಲ. ಆದರೆ ನಿಯಮಕ್ಕೆ ಅನುಗುಣವಾಗಿ ತ್ರಿವೇಣಿ ಸಂಗಮದೊಂದಿಗೆ ಸಮುದ್ರ ರಾಜನಲ್ಲಿ ಲೀನವಾಗುವ ನದಿಯಲ್ಲಿ ದೋಣಿಯಲ್ಲಿ ವೀಣಾ ವಾದನ ಮಾಡಿ ಸರಸ್ವತೀ ಆರಾಧನೆ ಮಾಡಿದ್ದಾರೆ ರಾಷ್ಟ್ರಮಟ್ಟದ ಖ್ಯಾತಿಯ ವೀಣಾ ವಾದಕಿ ಉಡುಪಿಯ ವಿದುಷಿ ಪವನ ಆಚಾರ್ಯ. ಅವರು ಕೋಡಿಬೆಂಗ್ರೆಯ ಶ್ರೀ ದುರ್ಗಾದೇವಿ ಮಹಾಕಾಳಿ ಅಮ್ಮನವರ ದೇವಸ್ಥಾನದ 15 ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವದಂದು ಈ ವಿಶೇಷ ವೀಣಾ ವಾದನ ಮಾಡಿದ್ದಾರೆ. ಸೀತಾ, ಸ್ವರ್ಣ ಮತ್ತು ಮಡಿಸಾಲು ನದಿಯ ಸಂಗಮ ಸ್ಥಳವಾದ ಕೋಡಿ ನದಿ ತೀರದಲ್ಲಿ ದೋಣಿಯಲ್ಲಿ ವೀಣಾ ವಾದನ ಮಾಡಲು ದೇವಸ್ಥಾನದ ಸಂಘಟಕರು ವೇದಿಕೆಯೊಂದನ್ನು ಮಾಡಿದ್ದರು. ವಿದುಷಿ ಅವರಿಗೆ ತಬಲಾದಲ್ಲಿ ವಿದ್ವಾನ್ ಮಾಧವ ಆಚಾರ್ಯ, ಸಹ ವೀಣಾ ವಾದಕರಾಗಿ ವೈಭವ ಪೈ, ತಾಳದಲ್ಲಿ ಕುಮಾರಿ ಜಾನ್ಹವಿ ಸಹಕರಿಸಿದ್ದರು.