Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೈಂದೂರು ತಾಲೂಕಿನ ಯಳಜಿತ್ ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ಏಳು ಜಾನುವಾರುಗಳು ದಾರುಣವಾಗಿ ಸಾವನ್ನಪ್ಪಿದ ನೆನಪು ಹಸಿರಾಗಿರುವಾಗಲೇ ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮಪಂಚಾಯತ್ ವ್ಯಾಪ್ತಿಲ್ಲಿ ಇನ್ನೆರಡು ಜಾನುವಾರಗಳು ಅಸ್ವಸ್ಥಗೊಂಡಿದ್ದು, ಪಶುವೈದ್ಯಾಧಿಕಾರಿಗಳು ಚಿಕಿತ್ಸೆ ಮುಂದುವರಿಸಿದ್ದಾರೆ.
ಕೊರ್ಗಿ ನಿವಾಸಿ ಗುಲಾಬಿ ಬಳೆಗಾರ್ತಿ ಎಂಬವರಿಗೆ ಸೇರಿದ ಒಂದು ಗಬ್ಬದ ದನ ಹಾಗೂ ಒಂದು ಕರು ಅಸ್ವಸ್ಥಗೊಂಡಿದೆ. ಕರುವಿನ ಸ್ಥಿತಿ ಗಂಭೀರವಾಗಿದ್ದು, ದನ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ದನ ತೋಟಕ್ಕೆ ಹೋಗುವ ವಿಚಾರದಲ್ಲಿ ನಿನ್ನೆ ಸಂಜೆ ಗುಲಾಬಿ ಬಳೆಗಾರ್ತಿ ಹಾಗೂ ಪಕ್ಕದ ಮನೆಯವರ ನಡುವೆ ಗಲಾಟೆ ನಡೆದಿತ್ತು. ಈ ವೇಳೆಯಲ್ಲಿ ನಾಳೆ ದನಗಳು ನಮ್ಮ ತೋಟಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದೂ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ದನಗಳಿಗೆ ವಿಷ ಹಾಕಿ ಸಾಯಿಸುವ ಯತ್ನ ನಡೆಸಿದ್ದಾರೆ ಎಂದು ದೂರಲಾಗಿದೆ. ಈ ಹಿಂದೆಯೂ ಕೂಡ ಒಂದು ದನ ಇದೇ ರೀತಿಯಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಪಶುವೈದ್ಯಾಧಿಕಾರಿಗಳು ಮೊಕ್ಕಂ ಹೂಡಿದ್ದು, ಚಿಕಿತ್ಸೆ ಮುಂದುವರೆಸಿದ್ದಾರೆ.
ಸ್ಥಳಕ್ಕೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಭೇಟಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ಗೋ ಸಂರಕ್ಷಣಾ ಪ್ರಕೋಷ್ಠದ ತಾಲೂಕು ಸಂಚಾಲಕ ಅವಿನಾಶ್ ಉಳ್ತೂರು, ಹ್ರಾಮೀಣ ಭಾಗದಲ್ಲಿ ಇಂತಹ ಪ್ರಕರಣಗಳ ಹೆಚ್ಚುತ್ತಿದ್ದು, ಈ ಕುರಿತು ಸಂಬಂಧಪಟ್ಟ ಇಲಾಖೆ ಸೂಕ್ತ ಕ್ಮ ಕೈಗೊಳ್ಳಬೇಕಾಗಿದೆ. ಬೈಂದೂರು ಹಾಗೂ ಕೊರ್ಗಿ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕುಂದಾಪುರ ಡಿವೈಎಸ್ಪಿ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.