Publish Date: Thu, 09 Dec 2021 (09:17 IST)
Updated Date: Thu, 09 Dec 2021 (09:19 IST)
ಚಿತ್ರದುರ್ಗ : ಪೂಜೆ ನೆಪದಲ್ಲಿ ಚಿನ್ನ ಪಡೆದು ಮಹಿಳೆಯರು ಹಾಗೂ ಯುವತಿಯರನ್ನು ವಂಚಿಸುತಿದ್ದ ಮೂವರು ಆರೋಪಿಗಳನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಯುವತಿ ಸೇರಿದಂತೆ ಹಲವರಿಗೆ ವಂಚನೆ ಆರೋಪ ಹೊತ್ತಿರುವ ಹುಬ್ಬಳ್ಳಿಯ ಬಂಡೆಪ್ಪ, ಭೀಮರಾವ್, ಬಾಗಲಕೋಟೆಯ ಗಣೇಶ ಶಾಸ್ತ್ರಿ ಎಂಬ ಖತರ್ನಾಕ್ ಆಸಾಮಿಗಳು ಬಂಧನವಾಗಿದ್ದಾರೆ. ಚಳ್ಳಕೆರೆ ಠಾಣೆ ಸಿಪಿಐ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಿರೋ ಪೊಲೀಸರು, 6.80 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ದೇವಿ ಪೂಜೆ ನೆಪದಲ್ಲಿ ಮಹಿಳೆಯರು, ಯುವತಿಯರಿಂದ ಚಿನ್ನಾಭರಣ ಪಡೆಯುತ್ತಿದ್ದ ವಂಚಕರು, ಪೂಜಾ ನೆಪದಲ್ಲು ನಂಬಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪ ಕೇಳಿಬಂದಿದ್ದು ಸಂಕಷ್ಟದಲ್ಲಿರುವವರನ್ನೇ ಟಾರ್ಗೆಟ್ ಮಾಡುತ್ತಿದ್ದರು.
ಉದ್ಯೋಗ, ಶುಭ ಯೋಗ, ಕಂಕಣ ಭಾಗ್ಯದ ಬಗ್ಗೆ ನಂಬಿಕೆ ಹುಟ್ಟಿಸಿ ವಂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿ, ಜನರ ಗಮನ ಸೆಳೆಯುತ್ತಿದ್ದ ಆರೋಪಿಗಳು ಅಮಾಯಕರನ್ನು ವಂಚನೆಯ ಬಲೆಗೆ ಸಿಲುಕಿಸಿ ಹಣ, ಬಂಗಾರ ದೋಚಿ ಪರಾರಿಯಾಗುತ್ತಿದ್ದರು.
ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಹಿಂದೆ ಇನ್ನು ದೊಡ್ಡ ಜಾಲವೊಂದು ಕೆಲಸ ಮಾಡ್ತಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಈ ಜಾಲವನ್ನು ಭೇದಿಸಿ ಮೂಲಕ ಆತಂಕದಲ್ಲಿ ಸಿಲುಕಿರುವ ಮಹಿಳೆಯರ ನೆಮ್ಮದಿ ಕಾಪಾಡಬೇಕೆಂಬ ಆಗ್ರಹ ಸಾರ್ವಜನಿಜವಾಗಿ ಕೇಳಿಬಂದಿದೆ.