Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಈಗ ಬಿಜೆಪಿ ಬರಲು ಸಿದ್ಧರಿದ್ದಾರೆ. ಅವರು ಬಂದರೆ ಸ್ವಾಗತ ಮಾಡುತ್ತೇನೆ. ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆ ಇದೆ ಎಂದು ಕ್ರೀಡಾ ಸಚಿವ ನಾರಾಯಣಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಪಕ್ಷಕ್ಕೆ ಬರುವುದಾಗಿ ತಿಳಿಸಿದ್ದಾರೆ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಈಗ ಬರುವುದಕ್ಕೆ ಆಗುತ್ತಿಲ್ಲ ಅಂತ ಹೇಳಿದ್ದಾರೆ. ನೋಡೋಣ ಮುಂದೆ ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ಅಭ್ಯರ್ಥಿ ಹಾಕಿದೆ. ಅವರು ಗೆಲ್ಲುವುದಿಲ್ಲ. ನಮಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳು ಇವೆ. ಎರಡನೇ ಪ್ರಾಶಸ್ತ್ಯದ ಮತದಲ್ಲಿ ನಾವು ಗೆಲ್ಲುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.
ನಾವು 17 ಜನ ಈಗ ಬಂದಿದ್ದೇವೆ. ಅದು ಮುಂದೆ ಪ್ಲಸ್ ಪ್ಲಸ್ ಆಗುತ್ತದೆ. ಯಾರು, ಯಾರು ಬರುತ್ತಾರೆ ಅಂತ ಈಗ ಹೇಳುವುದಿಲ್ಲ. ಈಗ ಹೇಳಿದರೆ ಅವರನ್ನು ಕೂಡಿ ಹಾಕುತ್ತಾರೆ. ಈಗಾಗಲೇ 4-5 ಜನರ ಹೆಸರು ನೀವೇ ಹಾಕಿದ್ದೀರಾ. ಇನ್ನು ಯಾರೆಲ್ಲಾ ಬರ್ತಾರೆ ಅಂತ ಮುಂದೆ ಗೊತ್ತಾಗುತ್ತದೆ ಅಂದರು.
ನಮ್ಮ ಜಿಲ್ಲೆಯಲ್ಲಿ ಅನೇಕರು ಬಿಜೆಪಿ ಸೇರ್ಪಡೆಗೆ ಆಸಕ್ತಿ ತೋರಿಸಿದ್ದಾರೆ. ಆದರೆ ಯಾರನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನ ಮಾಡಿ ಸೇರಿಸಿಕೊಳ್ಳುತ್ತೇವೆ. ಸದ್ಯ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸಮಾವೇಶ ಈಗ ಮಾಡುವುದಿಲ್ಲ ಅಂತ ತಿಳಿಸಿದರು. ಇನ್ನು ಮಂಡ್ಯದಲ್ಲಿ ಈ ಬಾರಿ ನಾವು 4 ಸ್ಥಾನ ಗೆಲ್ಲುತ್ತೇವೆ. ಹೇಗೆ ಗೆಲ್ಲುತ್ತೇವೆ ಅಂತ ನಾನು ಹೇಳುವುದಿಲ್ಲ. ಆದರೆ 4 ಸ್ಥಾನ ಬಿಜೆಪಿ ಗೆಲ್ಲುತ್ತದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.