Publish Date: Mon, 18 Feb 2019 (16:41 IST)
Updated Date: Mon, 18 Feb 2019 (16:42 IST)
ಚಾಲಾಕಿ ಕಳ್ಳಿಯರು ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದು ಜನರಿಂದ ಹಿಗ್ಗಾಮುಗ್ಗಾ ಥಳಿಸಿಕೊಂಡ ಘಟನೆ ನಡೆದಿದೆ.
ಬಸ್ ಪ್ರಯಾಣಿಕರ ಸೋಗಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಕಳ್ಳಿಯರಿಗೆ ಬಸ್ ಪ್ರಯಾಣಿಕರೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಪಕ್ಷಿಕೆರೆ ಎಂಬಲ್ಲಿ ನಡೆದಿದೆ. ಮಂಗಳೂರು ಜಿಲ್ಲೆಯ ಪಕ್ಷಿಕೆರೆ ಗ್ರಾಮದ ಕೆಮ್ರಾಲ್ ನಿವಾಸಿ ರತ್ನಾ ಎಂಬ ಮಹಿಳೆ ಬಸ್ನಲ್ಲಿ ಸಂಚರಿಸಿ ಪಕ್ಷಿಕೆರೆ ಚರ್ಚ್ ಬಳಿ ಇಳಿಯಲು ಮುಂದಾದಾಗ ಸರಗಳ್ಳಿಯರು ಕುತ್ತಿಗೆಯಿಂದ ಸರ ಸೆಳೆದು ಪರಾರಿಯಾಗಲು ಯತ್ನಿಸಿದ್ದಾರೆ.
ಈ ವೇಳೆ ರತ್ನಾ ಬೊಬ್ಬೆ ಹಾಕಿದ್ದು ಸ್ಥಳೀಯ ರಿಕ್ಷಾ ಚಾಲಕರು ಪರಾರಿಯಾಗುತ್ತಿದ್ದ ಸರಗಳ್ಳಿಯರ ತಂಡದಲ್ಲಿದ್ದ ನಾಲ್ವರನ್ನು ಹಿಡಿದಿದ್ದಾರೆ. ಒಟ್ಟು ಸೇರಿದ ಸಾರ್ವಜನಿಕರು ಮಹಿಳೆಯರ ಮೇಲೆ ಹಿಗ್ಗಾಮುಗ್ಗಾ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಿಳೆಯರು ಕನ್ನಡ, ಹಿಂದಿ ಭಾಷೆಯಲ್ಲಿ ಮಾತಾಡುತ್ತಿದ್ದು ಹೊರರಾಜ್ಯದವರು ಎಂದು ತಿಳಿದುಬಂದಿದೆ. ಇವರು ಭಾನುವಾರ ಬಸ್ನಲ್ಲಿ ರಶ್ ಹೆಚ್ಚಿರುವ ವೇಳೆ ವಿವಿಧ ಕಡೆಗಳಲ್ಲಿ ಬಸ್ಗಳಲ್ಲಿ ಸಂಚರಿಸಿ ಕಾರ್ಯಾಚರಣೆ ನಡೆಸುತ್ತಿದ್ದರು ಎನ್ನಲಾಗಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.