Publish Date: Mon, 23 Aug 2021 (14:09 IST)
Updated Date: Mon, 23 Aug 2021 (14:13 IST)
ಬೆಂಗಳೂರು ವಿದ್ಯಾರ್ಥಿಗಳು ಮತ್ತು ಮಕ್ಕಳು ಕೋವಿಡ್ -19 ಸೋಂಕಿನಿಂದ ಬಾಧಿತರಾಗದಂತೆ ಖಾತ್ರಿಪಡಿಸಿಕೊಳ್ಳುವ ಸಲುವಾಗಿ ಅವರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸ
ಲು ಕ್ರಿಯಾಯೋಜನೆ ರೂಪಿಸುವಂತೆ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಮಾಧ್ಯಮ ಪ್ರಕಟಣೆಯಲ್ಲಿ ಅವರು, ಶಾಲೆ ಮತ್ತು ಕಾಲೇಜುಗಳನ್ನು ತೆರೆಯುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಮಕ್ಕಳಲ್ಲಿ ಕೋವಿಡ್ -19 ಸಾಂಕ್ರಾಮಿಕವನ್ನು ನಿಗ್ರಹಿಸುವ ರೋಗ ನಿರೋಧಕ ಶಕ್ತಿ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದೂ ಅಷ್ಟೇ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಈ ಕ್ರಿಯಾ ಯೋಜನೆ ನಿಖರವಾಗಿರಬೇಕು ಮತ್ತು ಸಮಗ್ರವಾಗಿರಬೇಕು ಇದರಿಂದ ಸಂಪೂರ್ಣ ವಿದ್ಯಾರ್ಥಿ- ಸಮೂಹ ಆದಷ್ಟು ಶೀಘ್ರ ಈ ವ್ಯಾಪ್ತಿಗೆ ಒಳಪಡಬೇಕು. ಸೋಂಕಿಗೆ ನಾವು ಯಾವುದೇ ಅವಕಾಶವನ್ನೂ ನೀಡುವಂತಿರಬಾರದು. ರೋಗನಿರೋಧಕ ಶಕ್ತಿಯನ್ನು ಬೆಳೆಸಲು ಈ ಅಭಿಯಾನದಲ್ಲಿ ಲೋಪದೋಷಗಳಿಗೂ ಯಾವುದೇ ಅವಕಾಶವಿರಬಾರದು ಎಂದು ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.
ಶಾಲೆಗಳಲ್ಲಿ ಕೋವಿಡ್ ಸಂಬಂಧಿತ ಗುಣಮಟ್ಟದ ಕಾರ್ಯಾಚರಣೆ ವಿಧಾನಗಳು –ಎಸ್.ಓ.ಪಿ. ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಹಠಾತ್ ಭೇಟಿ ನೀಡುವ ಸಲುವಾಗಿ ಸರ್ಕಾರ ಒಂದು ತಂಡವನ್ನು ನಿಯೋಜಿಸಬೇಕು ಎಂದೂ ಶ್ರೀ ಕಾಗೇರಿ ಅವರು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ವರ್ಧಿಸುವ ಅಗತ್ಯದ ಕುರಿತಂತೆ ಶಿಕ್ಷಕರು, ಶಿಕ್ಷಣ ಇಲಾಖೆಯ ಸಿಬ್ಬಂದಿ ಮಿಗಿಲಾಗಿ ಪಾಲಕರಲ್ಲಿ ಜಾಗೃತಿ ಮೂಡಿಸುವುದು ಮಹತ್ವದ್ದಾಗಿದೆ ಎಂದು ಸ್ಪೀಕರ್ ಪ್ರತಿಪಾದಿಸಿದ್ದಾರೆ.