Publish Date: Tue, 31 Aug 2021 (10:32 IST)
Updated Date: Tue, 31 Aug 2021 (10:34 IST)
ಬೆಂಗಳೂರು: ಸದಾ ರಾಜಕೀಯ ಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹತ್ತು ದಿನಗಳ ಕಾಲ ವಿಶ್ರಾಂತಿಯಲ್ಲಿದ್ದರು. ನಗರದ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದ ಅವರು ಮಂಗಳವಾರ ಡಿಸ್ಚಾರ್ಜ್ ಅಗಲಿದ್ದಾರೆ. ಇದೀಗ ಮತ್ತೆ ಲವಲವಿಕೆಯಿಂದ ಇರುವ ಸಿದ್ದರಾಮಯ್ಯ ರಾಜಕೀಯ ಅಖಾಡದಲ್ಲಿ ಸಕ್ರಿಯರಾಗಲು ಸಜ್ಜಾಗಿದ್ದಾರೆ.
ಆಗಸ್ಟ್ 21 ರಂದು ಸಿದ್ದರಾಮಯ್ಯ ಅವರು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದರು. ಹತ್ತು ದಿನಗಳ ಕಾಲ ಸಿದ್ದರಾಮಯ್ಯ ಅವರು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿದ್ದು ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ಪ್ರತಿನಿತ್ಯ ವಾಕಿಂಗ್, ಜಿಮ್ನಲ್ಲಿ ವ್ಯಾಯಾಮ ಹಾಗೂ ಮಿತ ಆಹಾರ ಸೇವನೆಯಿಂದ ದೇಹವನ್ನು ಫಿಟ್ನಲ್ಲಿ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ದಾಖಲಾಗಿದ್ದರು. ಹತ್ತು ದಿನಗಳ ಕಾಲ ಅಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಸಮ್ಮಿಶ್ರ ಸರ್ಕಾರದ ಅವಧಿಯ ಸಂದರ್ಭದಲ್ಲಿ ಪಕ್ಷದ ಹಲವು ಮುಖಂಡರು ಭೇಟಿ ನೀಡಿದ್ದರು. ಪ್ರಕೃತಿ ಚಿಕಿತ್ಸಾಲದಲ್ಲಿ ಇದ್ದುಕೊಂಡೇ ರಾಜಕೀಯ ದಾಳವನ್ನು ಸಿದ್ದರಾಮಯ್ಯ ಉರುಳಿಸಿದ್ದರು. ಆದರೆ ಈ ಬಾರಿ ಜಿಂದಾಲ್ನಲ್ಲಿ ಜಮೀರ್ ಅಹ್ಮದ್ ಖಾನ್ ಹೊರತುಪಡಿಸಿ ಇತರ ಮುಖಂಡರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಲ್ಲ.
ನಿತ್ಯ ವ್ಯಾಯಾಮ ಹಾಗೂ ಮಿತ ಆಹಾರದಿಂದ ಸಂಪೂರ್ಣ ಫಿಟ್ ಆಗಿರುವ ಸಿದ್ದರಾಮಯ್ಯ ಸಂಪೂರ್ಣ ಲವಲವಿಕೆಯಿಂದಿದ್ದು, ರಾಜಕೀಯ ಅಖಾಡಕ್ಕೆ ಕಮ್ ಬ್ಯಾಕ್ ಆಗಲು ಸಜ್ಜಾಗಿ ನಿಂತಿದ್ದಾರೆ. ಚಿಕಿತ್ಸಾ ಕೇಂದ್ರದಿಂದ ವಾಪಸ್ ಆದ ಬಳಿಕ ರಾಜಕೀಯದಲ್ಲೂ ಸಕ್ರಿಯರಾಗಲಿದ್ದಾರೆ. ಮಹಾನಗರ ಪಾಲಿಕೆ ಹಾಗೂ ಪರಿಷತ್ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರವಾಸ ಹಾಗೂ ಸರಣಿ ಸಭೆಗಳನ್ನು ಸಿದ್ದರಾಮಯ್ಯ ನಡೆಸಲಿದ್ದಾರೆ. ಸೆಪ್ಟೆಂಬರ್ 4 ಹಾಗೂ 5 ರಂದು ಕೆಪಿಸಿಸಿ ಕಚೇರಿಯಲ್ಲಿ ಸರಣಿ ಸಭೆಗಳು ನಡೆಯಲಿದೆ. 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗಳ ಹಿನ್ನೆಲೆಯಲ್ಲಿ ಸಭೆಗಳು ನಡೆಯಲಿವೆ. ಜಿಲ್ಲಾವಾರು ಸಭೆಗಳು ನಡೆಯಲಿದ್ದು ಅಭ್ಯರ್ಥಿ ಆಯ್ಕೆ ಹಾಗೂ ಚುನಾವಣಾ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.
ಮತ್ತೊಂದು ಕಡೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸ ನಡೆಸಲು ಮುಂದಾಗಿದ್ದಾರೆ. ಅದರಂತೆ ಸಿದ್ದರಾಮಯ್ಯ ಕೂಡಾ ಪ್ರವಾಸ ಹಮ್ಮಿಕೊಳ್ಳುತ್ತಾರಾ ಎಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಸದ್ಯ ಕೋವಿಡ್ ಕಾರಣಕ್ಕಾಗಿ ರಾಜ್ಯ ಪ್ರವಾಸ ಹಮ್ಮಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಒಟ್ನಲ್ಲಿ ಪ್ರಕೃತಿ ಚಿಕಿತ್ಸೆಯಿಂದ ಫಿಟ್ ಆಗಿರುವ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೊಡೆತಟ್ಟಲು ಸಜ್ಜಾಗಿದ್ದಾರೆ.