Publish Date: Mon, 29 May 2023 (09:45 IST)
Updated Date: Mon, 29 May 2023 (10:41 IST)
ಬೆಳಗಾವಿ : ಸಚಿವ ಸತೀಶ್ ಜಾರಕಿಹೊಳಿಯವರಿಗೆ ಸಿಎಂ ಆಗುವ ಸಾಮರ್ಥ್ಯ ಇದೆ. ಅವರು ಮುಂದೆ ಸಿಎಂ ಆಗಿಯೇ ಆಗುತ್ತಾರೆ ಎಂದು ನೂತನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸತೀಶ್ ಜಾರಕಿಹೊಳಿಯವರಿಗೆ ಡಿಸಿಎಂ ಸ್ಥಾನ ಕೈತಪ್ಪಿದ್ದರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಈ ವೇಳೆ ಸತೀಶ್ ಅವರಿಗೆ ಡಿಸಿಎಂ ಅಲ್ಲ, ರಾಜ್ಯದ ಮುಖ್ಯಮಂತ್ರಿಯಾಗುವ ಸಾಮಥ್ರ್ಯವಿದೆ. ಮುಂದೆ ಖಂಡಿತಾ ಸಿಎಂ ಆಗುತ್ತಾರೆ ಎಂದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಈ ಹಿಂದೆ ನಡೆದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೂ ಸಚಿವರಿಗೆ ಅಧಿಕೃತವಾಗಿ ಇಲಾಖೆಗಳ ಹಂಚಿಕೆ ಆಗಿಲ್ಲ.
ನಾನು ಸಚಿವೆ ಆಗಿ ಪ್ರಮಾಣವಚನ ಸ್ವೀಕರಿಸಿ ಇನ್ನೂ 24 ಗಂಟೆಯಾಗಿಲ್ಲ. ರಾಜ್ಯದ ಜನರು, ಮುಖ್ಯಮಂತ್ರಿ ಹಾಗೂ ಡಿಸಿಎಂ ಮೆಚ್ಚುವಂತಹ ಆಡಳಿತ ನೀಡುತ್ತೇನೆ. ಯಾವುದೇ ಇಲಾಖೆ ನೀಡಿದರೂ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ ಎಂದಿದ್ದಾರೆ.