Publish Date: Tue, 29 Aug 2023 (15:24 IST)
Updated Date: Tue, 29 Aug 2023 (15:21 IST)
ದಾವಣಗೆರೆ : ಕರ್ನಾಟಕದಲ್ಲಿ ಹಲವು ನಾಯಕರು ಮೋದಿ ಮುಖ ತೋರಿಸಿ ಗೆಲ್ಲುತ್ತೇವೆ ಎನ್ನುವ ಭ್ರಮಾಲೋಕದಲ್ಲಿದ್ದಾರೆ. ರಾಜ್ಯ ನಾಯಕರ ಕೊಡುಗೆ ಏನ್ ಇದೆ? ಎಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಸ್ವಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ಮೋದಿಯವರ ಜನಪ್ರಿಯ ಕಾರ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿಲ್ಲ. ಬೇರೆ ರಾಜ್ಯದ ಮುಖ್ಯಮಂತ್ರಿಗಳು ಮೋದಿಯವರ ಕೆಲಸವನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡುತ್ತಾರೆ. ನಮ್ಮ ರಾಜ್ಯದ ನಾಯಕರನ್ನು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಾಕಿ ಪ್ರಚಾರ ಮಾಡ್ತಾ ಇದ್ದಾರೆ.
ಜನ ಸಾಮಾನ್ಯರು ಕೇಳ್ತಾ ಇದ್ದಾರೆ ರಾಜ್ಯ ನಾಯಕರನ್ನು ನೇಮಕ ಮಾಡಿಲ್ಲ ಎಂದು. ಕರ್ನಾಟಕದ ಬಿಜೆಪಿ ಆಡಳಿತವನ್ನು ಎಲ್ಲೋ ಒಂದು ಕಡೆ ಯಾರೋ ಒಬ್ಬರು ನಿಯಂತ್ರಣ ಮಾಡ್ತಾ ಇದ್ದಾರೆ. ಇದೇ ರೀತಿ ಮುಂದುವರಿದರೆ ರಾಜ್ಯ ಅದೋಗತಿಗೆ ಹೋಗುತ್ತದೆ ಎಂದು ಗುಡುಗಿದರು.
ಪಕ್ಷದಲ್ಲಿ ನಾಯಕರು ಇಲ್ಲ ಎಂದು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ. ಆದರೆ ಹೋಗುವವರು ಹೋಗಲಿ, ಇರುವವರು ಇರಲಿ ಎಂದು ದುರಹಂಕಾರದ ಮಾತುಗಳನ್ನಾಡುತ್ತಿದ್ದಾರೆ. ಇದನ್ನೆಲ್ಲ ಬಿಡಬೇಕು. ಪಕ್ಷ ಸಂಘಟನೆ ಮಾಡಬೇಕು ಎಂದು ಸಂಸದ ಜಿಎಂ ಸಿದ್ದೇಶ್ವರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.