Publish Date: Wed, 20 Oct 2021 (15:50 IST)
Updated Date: Wed, 20 Oct 2021 (15:55 IST)
ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾಗಿರುವ ರಾಗಿ ಬೆಳೆ ಮಳೆಯಿಲ್ಲದೆ ಬತ್ತಿಹೋಗುತ್ತಾ. ಮಳೆಗಾಗಿ ಮುಗಿಲಕಡೆ ಮುಖಮಾಡಿದ್ದ ರೈತಸಮುದಾಯಕ್ಕೆ ಹೆಚ್ಚಿನ ಮಳೆ ಬಂದಿದೆ. ಜಿಲ್ಲೆಯಲ್ಲಿ ರಾಗಿ ಬೆಳೆ ಹಸಿರುಹೊದಿಕೆಯೊಂದಿಗೆ ಹುಲ್ಲುಹಾಸಾಗಿ ಬೆಳೆಯುತ್ತಿದ್ದು ಬಹುತೇಕ ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.
ಜುಲೈ ಮತ್ತು ಆಗಸ್ಟ್ನಲ್ಲಿ ರೈತರು ರಾಗಿ ಬಿತ್ತನೆ ಮಾಡಿದ್ದು, ಮಳೆ ಆಗಿರಲಿಲ್ಲ. ನಂತರ ಬಂದಮಳೆಗೆ ರಾಗಿ ಪೈರು ಮೊಳಕೆಯೊಡೆದು ಹುಟ್ಟಿಬಂದಿತ್ತು. ಕಳೆದ ಹದಿನೈದು ದಿನಗಳಿಂದ ಉತ್ತಮ ಮಳೆ ಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಬಯಲುಸೀಮೆಯ ಪ್ರದೇಶವಾಗಿರು ವುದರಿಂದ ಯಾವುದೇ ನದಿಮೂಲಗಳು, ಡ್ಯಾಮ್ ಗಳು ಇಲ್ಲದ ಕಾರಣ ಮಳೆ ಆಶ್ರಿತವಾಗಿಯೇ ರಾಗಿ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಳೆ ಆಶ್ರಿತ ಬೆಳೆಗಳೇ ಅಧಿಕವಾಗಿದೆ. ಜಿಲ್ಲೆಯ ರೈತರ ಮುಖದಲ್ಲಿ ಸಂತಸ ಮೂಡಿದ್ದು, ಜಿಲ್ಲೆಯಲ್ಲಿ ಒಣಗಿದ್ದ ಬೆಳೆ ಈಗ ಕಳೆಕಟ್ಟಿದೆ. ಕೆಲಕೆರೆಗಳು ಕೋಡಿ ಬಿದ್ದಿವೆ. ಕೆರೆ ಕಟ್ಟೆ, ಹಳ್ಳಕೊಳ್ಳ, ಕೃಷಿಹೊಂಡ, ಕುಂಟೆಗಳಲ್ಲಿ ಮಳೆಯಿಂದ ನೀರು ತುಂಬಿವೆ.
ಮಳೆಯಿಂದ ಅನುಕೂಲವಾಗಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ. ಇದೇ ರೀತಿ ಮಳೆ ಬಂದರೆ ರಾಗಿ ಬೆಳೆ ಬಂಪರ್ ಬರಲಿದೆ. ರೈತರು ಪ್ರತಿವರ್ಷವೂ ರಾಗಿಬೆಳೆಯನ್ನೇ ನಂಬಿ ಕಾಲಕಾಲಕ್ಕೆ ಮಳೆರಾಯ ಕೃಪೆ ತೋರಬೇಕೆಂದು ಮಳೆಗಾಗಿ ದೇವರ ಮೊರೆ ಹೋಗುತ್ತಾರೆ. ಇದೀಗ ಅಕ್ಟೋಬರ್ ಮೊದಲ ವಾರದಿಂದ ಬರುತ್ತಿರುವ ಹದ ಮಳೆಗೆ ಉತ್ತಮ ಬೆಳೆಗಳು ಎಲ್ಲೆಲ್ಲೂ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಸರ್ಕಾರ ರಾಗಿಗೆ ಬೆಂಬಲ ಬೆಲೆ ನಿಗದಿಪಡಿಸಿದೆ.
geetha
Publish Date: Wed, 20 Oct 2021 (15:50 IST)
Updated Date: Wed, 20 Oct 2021 (15:55 IST)