Publish Date: Wed, 01 Mar 2023 (15:12 IST)
Updated Date: Wed, 01 Mar 2023 (15:14 IST)
7ನೇ ವೇತನ ಜಾರಿಗೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಮುಷ್ಕರಕ್ಕೆ ಸರ್ಕಾರಿ ನೌಕರರು ಮುಂದಾಗಿದ್ದರಿಂದ ರಾಜ್ಯದಲ್ಲಿ ಭಾರಿ ಸಮಸ್ಯೆ ಎದುರಾಗಿತ್ತು. ಸರ್ಕಾರಿ ಆಸ್ಪತ್ರೆಗಳ ಮುಂದೆ ರೋಗಿಗಳು ನರಳಾಡುವ ಪರಿಸ್ಥಿತಿ ಎದುರಾಯ್ತು. ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಸರ್ಕಾರಿ ಕಚೇರಿಗಳು ಖಾಲಿ ಖಾಲಿಯಾಗಿವೆ. ಇದರ ನಡುವೆ ಇಲ್ಲೊಂದು ಸರ್ಕಾರಿ ಕಚೇರಿ ಶಾಸಕರನ್ನು ಒಳಗಡೆ ಕೂರಿಸಿಕೊಂಡು ಕೆಲಸ ಮಾಡಿದ್ದು ಆಚೆ ಜನ ಸಾಮಾನ್ಯರು ಕಾದುಕುಳಿತ ಘಟನೆ ನಡೆದಿದೆ. ಇಂದು ಮುಷ್ಕರ ಹಿನ್ನೆಲೆ ರಾಜ್ಯದಲ್ಲಿ ಬಹುತೇಕ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಲಾಗಿತ್ತು. ಆದ್ರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಸೇವೆ ಸ್ಥಗಿತಗೊಳಿಸಿ ಕೇವಲ ಶಾಸಕರಿಗಾಗಿ ಮಾತ್ರ ಅಧಿಕಾರಿಗಳು ಕೆಲಸ ಮಾಡುತ್ತಿದ್ರು. ಕಚೇರಿಯ ಹೊರಗಡೆ ಬಾಗಿಲಿಗೆ ಬೀಗ ಹಾಕಿಕೊಂಡು ಒಳಗಡೆ JDS ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಕೂರಿಸಿಕೊಂಡು ಅಧಿಕಾರಿಗಳು ಅವರ ಕೆಲಸ ಮಾಡಿಕೊಟ್ಟಿದ್ದಾರೆ. ಜನ ಸಾಮಾನ್ಯರಿಗೊಂದು ನ್ಯಾಯ ಜನಪ್ರತಿನಿಧಿಗಳಿಗೊಂದು ನ್ಯಾಯ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.