Publish Date: Wed, 19 Apr 2023 (09:46 IST)
Updated Date: Wed, 19 Apr 2023 (10:24 IST)
ಬೆಳಗಾವಿ : ನನ್ನ ಎದುರಾಳಿ ಪ್ರಬಲ ಅಭ್ಯರ್ಥಿ ಎಂದು ಪರಿಗಣಿಸಿ ಚುನಾವಣೆಯನ್ನು ಎದುರಿಸುತ್ತೇನೆ. ಜನರ ಆಶೀರ್ವಾದದಿಂದ 7ನೇ ಬಾರಿಗೆ ಶಾಸಕನಾಗುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವತ್ತು ನಾಮಪತ್ರ ಸಲ್ಲಿಸಲು ಯುವಕರ ದಂಡೇ ಹರಿದು ಬಂದಿದೆ. ನಾನು ಯಾವತ್ತೂ ನನ್ನ ಎದುರಾಳಿಯನ್ನು ಪ್ರಬಲ ಅಭ್ಯರ್ಥಿ ಎಂದು ಪರಿಗಣಿಸುತ್ತೇನೆ.
ಜನ ಹೆಚ್ಚಿದ್ದಾರೆ ಎಂದು ಹಿಗ್ಗುವುದಿಲ್ಲ. ಹಾಗೆಯೇ ಕಡಿಮೆ ಜನ ಸೇರಿದ್ದಾರೆ ಎಂದು ಕುಗ್ಗುವುದಿಲ್ಲ. ನನ್ನ ಎದುರಾಳಿ ಪ್ರಬಲ ಅಭ್ಯರ್ಥಿ ಎಂದು ತಿಳಿದು ಚುನಾವಣೆ ಎದುರಿಸುತ್ತೇನೆ. ಜನರ ಆಶೀರ್ವಾದದಿಂದ 7ನೇ ಬಾರಿಗೆ ಶಾಸಕನಾಗುತ್ತೇನೆ ಎಂದರು.
ಅಮರನಾಥ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಾನು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ನನ್ನ ಪುತ್ರ ಮಂಗಳವಾರ ಡಮ್ಮಿ ನಾಮಪತ್ರ ಸಲ್ಲಿಸಿದ್ದಾರೆ. ಅದನ್ನು ವಾಪಸ್ ತೆಗೆದುಕೊಳ್ಳುತ್ತಾರೆ ಎಂದರು.