Publish Date: Sun, 12 Feb 2023 (12:59 IST)
Updated Date: Sun, 12 Feb 2023 (11:56 IST)
ಬೆಂಗಳೂರು : ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಮರುಜೀವ ಬಂದ ಬಳಿಕ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ದಾಳಿಯನ್ನು ಲೋಕಾಯುಕ್ತ ಅಧಿಕಾರಿಗಳು ಕೈಗೊಂಡಿದ್ದಾರೆ.
ಮೊದಲ ದಾಳಿಯಲ್ಲೇ ಬಿಡಿಎ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು, ಬಿಸಿ ಮುಟ್ಟಿಸಿದ್ದಾರೆ. ಬಿಡಿಎನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಅವ್ಯವಹಾರಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ 3:30ರ ಸುಮಾರಿಗೆ ಲೋಕಾಯುಕ್ತ ಅಧಿಕಾರಿಗಳು ಕುಮಾರ ಪಾರ್ಕ್ ಬಳಿಯ ಬಿಡಿಎ ಕೇಂದ್ರ ಕಚೇರಿಗೆ ಲಗ್ಗೆ ಇಟ್ಟಿದ್ದರು.
ಸುಮಾರು 35 ಅಧಿಕಾರಿಗಳ 6 ತಂಡಗಳು ದಾಳಿ ನಡೆಸಿ ಟೌನ್ ಪ್ಲಾನಿಂಗ್, ಅಲಾಟ್ಮೆಂಟ್ ಸೆಕ್ಷನ್ ಮತ್ತು ಪರಿಹಾರ ವಿತರಣೆ ಸೆಕ್ಷನ್ಗಳಲ್ಲಿ ಕಂಡು ಬಂದ ಅಕ್ರಮ ಅವ್ಯವಹಾರಗಳ ಬಗ್ಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.