Publish Date: Tuesday, 06 September 2022 (15:33 IST)
Updated Date: Tuesday, 06 September 2022 (18:35 IST)
ಪ್ರವಾಹದಂತೆ ಮಳೆ ನೀರು ಹರಿದು ಹೋಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿಗಳಿಗೆ ಹಾನಿ ಸಂಭವಿಸಿದೆ. ಅದರಂತೆ ಸೋಮವಾರ ಸುರಿದ ಮಳೆಗೆ ಗದಗ ಜಿಲ್ಲೆಯಲ್ಲಿ ಅವಾಂತರವೇ ಸೃಷ್ಟಿಯಾಗಿದ್ದು, ಸಿಹಿಹಳ್ಳ ಹಾಗೂ ಸೌಳ ಹಳ್ಳಗಳು ಉಕ್ಕಿ ಹರಿದಿವೆ. ಇನ್ನೊಂದೆಡೆ ಗದಗ ತಾಲೂಕಿನ ಮದಗಾನೂರ ಗ್ರಾಮದಲ್ಲಿ 500ಕ್ಕೂ ಹೆಚ್ಚು ಮನೆಗೆ ಮಳೆ ನೀರು ನುಗ್ಗಿದ್ದು, ರಾತ್ರೋ ರಾತ್ರಿ ರೈತರು ದಿಕ್ಕೆಟ್ಟಿದ್ದಾರೆ. ಬಹುತೇಕ ರೈತರ ಮನೆಯಲ್ಲಿನ ಧಾನ್ಯದರಾಶಿ ಹಾಳಾಗಿದ್ದು, ದಿನಬಳಕೆಯ ವಸ್ತುಗಳು ನೀರುಪಾಲಾಗಿವೆ. ಶೇಂಗಾ, ಈರುಳ್ಳಿ, ಮೆಣಸಿನಕಾಯಿ ಸೇರಿ ಇತರೆ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಗದಗ ಮತ್ತು ಬೆಟಗೇರಿ ಅವಳಿ ನಗರದಲ್ಲಿ ಜಲಪ್ರಳಯ ಸಂಭವಿಸಿದ್ದು, ಅನೇಕ ಪ್ರದೇಶಗಳಲ್ಲಿ ಜನರ ಜೀವನ ಅಸ್ತವ್ಯಸ್ಥಗೊಂಡಿತು. ಈ ನಿಟ್ಟಿನಲ್ಲಿ ತಡರಾತ್ರಿಯೇ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿ ವೈಶಾಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವಳಿ ನಗರದ ಮಂಜುನಾಥ್, ಅಂಬೇಡ್ಕರ್, ಗಂಗೀಮಡಿ ಬಡಾವಣೆ, ಭಜಂತ್ರಿ ಓಣಿ ಸೇರಿ ಹಲವಡೆ ಸಾಕಷ್ಟು ಸಮಸ್ಯೆಗಳಾಗಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿ ಅಪಾಯದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯ ನಡೆದಿದ್ದು, ರಾತ್ರಿ ಕಳೆಯಲು ಜನರಿಗೆ ವಿವಿಧ ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ನಡೆಸಲಾಯಿತು. ಇಲ್ಲಿ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಯಿತು.