Publish Date: Fri, 10 Apr 2020 (20:09 IST)
Updated Date: Fri, 10 Apr 2020 (20:10 IST)
ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಪಡಿತರ ನೀಡಲು ಹಣ ಪಡೆದರೆ ನ್ಯಾಯಬೆಲೆ ಅಂಗಡಿಯ ಪರವಾನಿಗೆಯನ್ನು ಶಾಶ್ವತವಾಗಿ ರದ್ದುಗೊಳಿಸಲಾಗುತ್ತಿದೆ.
ಹೀಗಂತ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಆಹಾರ ಪೂರೈಕೆ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯ ಬೆಲೆ ಅಂಗಡಿಗಳವರು ಇಂತಹ ಸಂದರ್ಭದಲ್ಲಿ ಮಾನವೀಯತೆ ತೋರಿ, ಪಡಿತರವನ್ನು ಬಡವರಿಗೆ ಸರಿಯಾಗಿ ಹಂಚಬೇಕು. ಸಮಯ ಮಿತಿ ಇಲ್ಲದೆ ಪಡಿತರ ವಿತರಿಸಬೇಕು ಎಂದು ಪಡಿತರ ಅಂಗಡಿಗಳ ಮಾಲೀಕರಿಗೆ ಸೂಚಿಸಿದರು.
ಕೇಂದ್ರ ಸರ್ಕಾರದ ವತಿಯಿಂದ ನೀಡುತ್ತಿರುವ ಪಡಿತರವನ್ನು ಇದೇ ತಿಂಗಳಾಂತ್ಯದಲ್ಲಿ ವಿತರಿಸಲಾಗುವುದು, ಗ್ಯಾಸ್ ಸಹ ಉಚಿತವಾಗಿ ನೀಡಲಾಗುತ್ತಿದೆ. ಯಾರು ಸಹ ಹಣ ನೀಡುವ ಅವಶ್ಯಕತೆ ಇಲ್ಲ, ಪಡಿತರವನ್ನು ನಾಗರೀಕರಿಗೆ ಸರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಪ್ರವಾಸ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ರಾಜ್ಯದಲ್ಲಿರುವ 19 ಸಾವಿರ ಪಡಿತರ ಅಂಗಡಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.