Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಚಿಲುಮೆ ಸಂಸ್ಥೆಯ ಅವ್ಯವಹಾರ ಭಾರೀ ಸಂಚಲನ ಮೂಡಿಸಿದ್ದು, ಚಿಲುಮೆಯ ಭ್ರಷ್ಟಾಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದರ ಬಗ್ಗೆ ಮಾಜಿ ಸಚಿವ K.S. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಇದರ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ, ಯಾವ ಪಕ್ಷದವರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಆಗಬೇಕು, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು. ಇದರಲ್ಲಿ ಅಶ್ವಥ್ ನಾರಾಯಣ್ ಸೇರಿದಂತೆ ಬೇರೆ ಯಾರ ಪಾತ್ರ ಇದೆಯೋ, ಇಲ್ಲವೋ ಎಂಬುದು ತನಿಖೆಯಿಂದ ಹೊರಬರಲಿ ಎಂದು ಹೇಳಿದ್ರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕೊಪ್ಪಳದಲ್ಲಿ ಸಿದ್ದರಾಮಯ್ಯರವರು 5 ಜನ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದು, ಡಿ.ಕೆ. ಶಿವಕುಮಾರ್ಗೆ ಮಾನ, ಮರ್ಯಾದೆ ಇದ್ದರೆ ಸಿದ್ದರಾಮಯ್ಯ ವಿರುದ್ಧ ಶಿಸ್ತು ಕ್ರಮ ಜರುಗಿಸಲಿ. ಸಿದ್ದರಾಮಯ್ಯಗೆ ಹೀಗೆ ಹೇಳಲು ಅಧಿಕಾರ ನೀಡಿದವರು ಯಾರು? ಹಾಗಾದರೆ ಪಕ್ಷದ ವ್ಯವಸ್ಥೆಗಿಂತ ಸಿದ್ದರಾಮಯ್ಯ ದೊಡ್ಡವರೇ ಎಂದು ಈಶ್ವರಪ್ಪ ಪ್ರಶ್ನಿಸಿದ್ರು. ಇದೇ ರೀತಿ 224 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನೂ ಘೋಷಿಸಿ ಬಿಡಿ, ಅವರ ಬೆಂಬಲಿಗರಿಗೂ ಸಂತಸವಾಗುತ್ತದೆ. ಹೀಗೆ ಆದರೆ ಕಾಂಗ್ರೆಸ್ ಸರ್ವನಾಶವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಗುಡುಗಿದರು.