Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಭಾರತ್ ಜೋಡೋ ಯಾತ್ರೆ ವೇಳೆ ರೈತರು, ಯುವಕರು ಮತ್ತು ಬುಡಕಟ್ಟು ಜನಾಂಗದವರನ್ನು ಭೇಟಿಯಾದ ನಂತರ ಅವರ ನೋವು ಏನೆಂಬುದನ್ನು ಅರಿತಿದ್ದೇನೆ. BJP ಅರಣ್ಯವನ್ನು ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸುವ ಮೂಲಕ ಆದಿವಾಸಿಗಳನ್ನು ಸ್ಥಳಾಂತರಿಸುವ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಗುಜರಾತ್ನಲ್ಲಿ ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಂತೆಯೇ ಮೊದಲ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬುಡಕಟ್ಟು ಜನಾಂಗದವರು ದೇಶದ ಮೊದಲ ಮಾಲೀಕರು ಎಂದು ಪ್ರತಿಪಾದಿಸಿದರು. ಆದರೆ BJP ಅವರು ವಾಸಿಸುತ್ತಿರುವ ಅರಣ್ಯ ಪ್ರದೇಶ ತೆಗೆದುಕೊಂಡು ಅವರ ಮಕ್ಕಳನ್ನು ಆಧುನಿಕ ಶಿಕ್ಷಣದಿಂದ ದೂರವಿಡುವ ಕೆಲಸ ಮಾಡುತ್ತಿದೆ ಎಂದರು. ದೇಶದ ಏಕತೆಗಾಗಿ 3,570 ಕಿಮೀ ಯಾತ್ರೆ ನಡೆಸಲಾಗುತ್ತಿದೆ. ಈ ಸಮಯದಲ್ಲಿ ರೈತರು, ಯುವಕರು ಮತ್ತು ಬುಡಕಟ್ಟು ಸಮುದಾಯದ ಜನರ ಸಮಸ್ಯೆಯನ್ನು ಆಲಿಸಿದ ನಂತರ ಅವರ ನೋವನ್ನು ತಾನು ಕೂಡಾ ಅನುಭವಿಸಿರುವುದಾಗಿ ತಿಳಿಸಿದರು. ಈವರೆಗಿನ ಯಾತ್ರೆಯ ಅನುಭವವನ್ನು ಹಂಚಿಕೊಂಡ ಕಾಂಗ್ರೆಸ್ ನಾಯಕ, ರೈತರು, ಯುವಕರು ಮತ್ತು ಬುಡಕಟ್ಟು ಜನಾಂಗದವರೊಂದಿಗೆ ಮಾತನಾಡುವಾಗ ದುಃಖವಾಯಿತು. ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾದ ದರ, ಬೆಳೆ ವಿಮೆ ಹಣ ಅಥವಾ ಸಾಲ ಮನ್ನಾ ಆಗದೆ ತಮ್ಮ ಅನುಭವವನ್ನು ಹಂಚಿಕೊಂಡರು.