Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕುಕ್ಕರ್ ಬಾಂಬ್ ಸ್ಫೋಟಕ್ಕೆ ತಯಾರಿ ನಡೆಸಿದ್ದ ಉಗ್ರ ಶಾರೀಕ್ ಜಾತಕವನ್ನು ಪೊಲೀಸರು ಕೆದಕಿದ್ದು, ಭಯಾನಕ ಮಾಹಿತಿ ಬಹಿರಂಗವಾಗಿದೆ. ಈತ ಬಾಂಬ್ ತಯಾರಿಕೆಯಲ್ಲಿ ಸಿದ್ಧಹಸ್ತನಾಗಿದ್ದ ಎಂದು ತಿಳಿದು ಬಂದಿದೆ. ಈತ ಬೇರೆಯವರಿಗೆ ಬಾಂಬ್ ತಯಾರಿಸುವುದು ಹೇಗೆಂದು ಟ್ರೈನಿಂಗ್ ಕೂಡಾ ಕೊಡ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಶಾರಿಕ್ ಐಸಿಸ್ನ ಅಧಿಕೃತ ಮಾಧ್ಯಮ ಕೇಂದ್ರ ಅಲ್ - ಹಯಾತ್ನಲ್ಲಿ ಸಕ್ರಿಯವಾಗಿದ್ದ. ಅಲ್ ಹಯಾತ್ ಸದಸ್ಯರಾಗಿದ್ದ ಇಬ್ಬರು ಸಹಚರರಿಗೆ ಶಾರೀಕ್ ಟ್ರೈನಿಂಗ್ ಕೂಡ ನೀಡಿದ್ನಂತೆ. ಟೆಲಿಗ್ರಾಮ್, ಇನ್ಸ್ಟಾಗ್ರಾಮ್, ವೈರ್, ಎಲಿಮೆಂಟ್ ಆ್ಯಪ್ಗಳಲ್ಲಿ ಬಾಂಬ್ ತಯಾರಿಸುವ ವಿಡಿಯೋಗಳನ್ನು, PDF ದಾಖಲೆಗಳನ್ನೂ ಆತ ಹಂಚಿಕೊಂಡಿದ್ದ. ISIS, ಭಯೋತ್ಪಾದನೆ ಕೆಲಸಗಳಿಗೆ ಸಂಬಂಧಿಸಿದ ಆಡಿಯೋ, ವಿಡಿಯೋ ಲಿಂಕ್ಗಳನ್ನು ಆತ ಶೇರ್ ಮಾಡಿದ್ದ. ಶಾರೀಕ್ ಯಾಸಿನ್ ಜೊತೆ ಸತತ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ತಿಳಿದು ಬಂದಿದೆ. ಶಿವಮೊಗ್ಗದ ತುಂಗಾ ನದಿ ದಡದಲ್ಲಿ ಬಾಂಬ್ ಪ್ರಾಯೋಗಿಕ ಸ್ಫೋಟ ಯಶಸ್ವಿಗೊಳಿಸಿದ್ದು, ವಿಧ್ವಂಸಕ ಕೃತ್ಯಗಳ ಮೂಲಕ ಜನರಲ್ಲಿ ಭಯ ಹುಟ್ಟುಹಾಕಲು ಕಿರಾತಕ ಪ್ಲ್ಯಾನ್ ಮಾಡ್ಕೊಂಡಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಕ್ರಿಪ್ಟೊ ಕರೆನ್ಸಿ ಮೂಲಕ ಉಗ್ರ ಶಾರೀಕ್ ವ್ಯವಹರಿಸುತ್ತಿದ್ದು, ಸಹಚರರಿಗೆ ಕ್ರಿಪ್ಟೊ ಕರೆನ್ಸಿ ರೂಪದಲ್ಲಿ ಹಣ ವರ್ಗಾವಣೆ ಮಾಡ್ತಿದ್ದ. ಶಾರೀಕ್ಗೆ ಮುಸ್ಲಿಂ ರಾಷ್ಟ್ರಗಳಿಂದ ಲಕ್ಷ ಲಕ್ಷ ಹಣ ಹರಿದು ಬರ್ತಿದ್ದು, ಶಾರೀಕ್ ಸಹೋದರಿ ಅಕೌಂಟಿಗೆ ಬಯಸಿದಾಗಲೆಲ್ಲಾ ಹಣ ಬರ್ತಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.